ADVERTISEMENT

50 ವರ್ಷಗಳ ಹಿಂದೆ: ಬುಧವಾರ 26.7.1972

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 19:30 IST
Last Updated 25 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯದ ಹೆಸರು ‘ಕರ್ನಾಟಕ’

ಬೆಂಗಳೂರು, ಜುಲೈ 25– ಸಂತೋಷ, ಸಂಭ್ರಮಗಳಿಂದ ಪುಳಕಿತಗೊಂಡ ವಿಧಾನಸಭೆಯಲ್ಲಿ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಾಯಿಸಲು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಮಂಡಿಸಿದ ಐತಿಹಾಸಿಕ ನಿರ್ಣಯಕ್ಕೆ ದೊರಕಿದ ಸ್ವಾಗತ ಸಂಪೂರ್ಣ ಅಖಂಡ.

ಕರತಾಡನ, ಸಿಹಿ ಹಂಚಿಕೆ ನಡುವೆ ಸುಮಾರು 3 ಗಂಟೆಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು, ನವ ನಾಮಕರಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರವನ್ನು ಅಭಿನಂದಿಸಿದರು.

ADVERTISEMENT

ಚರ್ಚೆ ಮುಗಿದು ನಿರ್ಣಯ ಇಂದೇ ಅಂಗೀಕಾರವಾಗಬೇಕೆಂದಿದ್ದರೂ, ಸದಸ್ಯರ ಮಾತಿನ ಉತ್ಸಾಹವನ್ನನುಸರಿಸಿ, ಚರ್ಚೆಯನ್ನು ನಾಳೆಯೂ ಮುಂದುವರಿಸಲು ಅಧ್ಯಕ್ಷೆ ಶ್ರೀಮತಿ ಕೆ.ಎಸ್.ನಾಗರತ್ನಮ್ಮ ಅವರು ಅವಕಾಶ ನೀಡಿದರು. ರಾಹುಕಾಲದ ಆರಂಭಕ್ಕೆ ಮುಂಚಿತವಾಗಿ, ಮಧ್ಯಾಹ್ನ ಎರಡೂವರೆ ಗಂಟೆಗೆ ಅರಸು ಅವರು ಸಭೆಯ ಮುಂದೆ ನಿರ್ಣಯ ಮುಂದಿಟ್ಟರು.

ತಪ್ಪಾಗಿ ಕಾಶ್ಮೀರವನ್ನು ಗುರುತಿಸಿದ್ದ ಭೂಪಟ ಬಳಕೆಗೆ ನಿಷೇಧ

ಬೆಂಗಳೂರು, ಜುಲೈ 25– ಕಾಶ್ಮೀರವನ್ನೂ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಂತೆ ನೆರೆರಾಷ್ಟ್ರವನ್ನಾಗಿ ತೋರಿರುವ ನಕ್ಷೆಯ
ನ್ನೊಳಗೊಂಡ ಹತ್ತನೇ ಸ್ಟ್ಯಾಂಡರ್ಡ್ ಮ್ಯಾಪ್ಡ್ರಾಯಿಂಗ್ ಪುಸ್ತಕವನ್ನು ಹಿಂತೆಗೆದು ಕೊಳ್ಳಬೇಕೆಂದು ಪ್ರಕಾಶಕರಿಗೆ ಸರ್ಕಾರ ಆಜ್ಞೆ ಮಾಡಿದೆ.

ಆ ಪುಸ್ತಕಗಳನ್ನು ಶಾಲೆಗಳಲ್ಲಿ ಬಳಸಲು ಬಿಡಬಾರದೆಂದೂ, ಅಂತಹವು ಕಂಡು ಬಂದರೆ ಮುಟ್ಟುಗೋಲು ಹಾಕಿಕೊಳ್ಳ
ಬೇಕೆಂದೂ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.