‘ರಾಷ್ಟ್ರಹಿತಕ್ಕಾಗಿ’ ನಿಕ್ಸನ್ ರಾಜೀನಾಮೆ
ವಾಷಿಂಗ್ಟನ್, ಆ. 9– ವಾಟರ್ಗೇಟ್ ಹಗರಣದಿಂದ ರಾಜಕೀಯ ಭವಿಷ್ಯವನ್ನು ನುಚ್ಚುನೂರು ಮಾಡಿಕೊಂಡ ರಿಚರ್ಡ್ ಮಿಲ್ಹೌಸ್ ನಿಕ್ಸನ್ ಅವರು ರಾಷ್ಟ್ರದ ಅಧ್ಯಕ್ಷರಾಗಿ ನಿನ್ನೆ ರಾತ್ರಿ ಕೊನೆಯ ಟೆಲಿವಿಷನ್ ಭಾಷಣ ಮಾಡಿ ಬಹಳ ನಿರೀಕ್ಷಿಸಿದ್ದ ರಾಜೀನಾಮೆಯನ್ನು ಪ್ರಕಟಿಸಿದರು.
ವಾಟರ್ಗೇಟ್ ಹಗರಣದಿಂದ ಆಗಿರುವ ಗಾಯವನ್ನು ಗುಣಪಡಿಸಲು, ಅಮೆರಿಕಕ್ಕೆ ಜೆರಾಲ್ಡ್ ಫೋರ್ಡ್ ಅವರನ್ನು ‘ಪೂರ್ಣಕಾಲದ ಅಧ್ಯಕ್ಷ’ರನ್ನಾಗಿ ಮಾಡಲು ತಾವು ರಾಜೀನಾಮೆ ನೀಡುತ್ತಿರುವುದಾಗಿ ಅವರು ರಾಷ್ಟ್ರಕ್ಕೆ ಪ್ರಕಟಿಸಿದರು.
ಅಧ್ಯಕ್ಷರಾಗಿ ಅಧಿಕಾರಕ್ಕೆ ಬರುವ ಫೋರ್ಡ್ ಅವರಿಗೆ ಪೂರ್ಣ ಬೆಂಬಲವನ್ನು ನೀಡಬೇಕೆಂದು ಅಮೆರಿಕನ್ನರನ್ನು ಅವರು ಒತ್ತಾಯ ಮಾಡಿದರು.
ಬ್ಯಾಂಕ್ ಜವಾನನ ಮನೆಯಿಂದ 1 ಲಕ್ಷಕ್ಕೂ ಹೆಚ್ಚು ಹಣ ವಶ
ಮಂಡ್ಯ, ಆ. 9– ಇಲ್ಲಿನ ಬ್ಯಾಂಕೊಂದರ ಜವಾನನ ಮನೆಯಲ್ಲಿದ್ದ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ತಿಳಿದುಬಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಂಡ್ಯ ಶಾಖೆಯಲ್ಲಿ ಜವಾನ ಕೆಲಸದಲ್ಲಿರುವ ಟಿ. ತಿಮ್ಮಯ್ಯ ಉರುಫ್ ಕುಳ್ಳಯ್ಯ ಎಂಬುವವರ ಮನೆಗೆ ಹಠಾತ್ತನೆ ಕೇಂದ್ರ ರೆವಿನ್ಯೂ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಲೆಕ್ಕಕ್ಕೆ ತೆಗೆದುಕೊಳ್ಳದ ಹಾಗೂ ಹೊಸ ನೋಟುಗಳ ರೂಪದಲ್ಲಿದ್ದ ಒಂದು ಲಕ್ಷ ಹದಿನಾರು ಸಾವಿರದ ಆರುನೂರ ಏಳು ರೂಪಾಯಿಗಳನ್ನು ವಶಪಡಿಸಿಕೊಂಡು ಚಿನ್ನ ಮತ್ತು ಇತರೆ ಆಭರಣಗಳಿಗಾಗಿ ಶೋಧನೆ ನಡೆಸುತ್ತಿದ್ದಾರೆಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.