ಬಂಗಾಳ ಪ್ರದೇಶ ಕಾಂಗ್ರೆಸ್ ಕಾರ್ಯಸಮಿತಿ ಸಸ್ಪೆಂಡ್
ನವದೆಹಲಿ, ನ. 25 – ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯರೆಲ್ಲರನ್ನೂ ಕಾಂಗ್ರೆಸ್ನ ತಾತ್ಕಾಲಿಕ ಅಧ್ಯಕ್ಷ ಸಿ. ಸುಬ್ರಹ್ಮಣ್ಯಂ ಇಂದು ಸಸ್ಪೆಂಡ್ ಮಾಡಿದರು.
ಸಿಂಡಿಕೇಟ್ ಪರವಾಗಿರುವ ಕಾರ್ಯಕರ್ತರೇ ಬಹುಮತ ಪಡೆದಿರುವ ಮೈಸೂರು, ತಮಿಳುನಾಡು ಮತ್ತು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಗಳ ಬದಲಾಗಿಯೂ ಇದೇ ರೀತಿ ಅಡ್ಹಾಕ್ ಸಮಿತಿಗಳನ್ನು ಇನ್ನು ಕೆಲವು ವಾರಗಳಲ್ಲೇ ನೇಮಿಸುವ ನಿರೀಕ್ಷೆಯಿದೆ.
ಕಾರ್ಯಸಮಿತಿ ಸ್ಥಳದಲ್ಲಿ ತಾತ್ಕಾಲಿಕ ಸಮಿತಿಯೊಂದನ್ನು ಅವರು ನೇಮಿಸಿದ್ದಾರೆ. ಈ ಸಮಿತಿಯಲ್ಲಿ ಕೆ.ಕೆ. ಶುಕ್ಲ (ಸಂಚಾಲಕ), ಪಿ.ಕೆ. ಮುಖರ್ಜಿ ಮತ್ತು ಅಬ್ದುಲ್ ಸತಾರ್ ಅವರಿದ್ದಾರೆ.
ವಿಶ್ವಾಸಮತ ಕೇಳಲು ಗುಪ್ತಾಗೆ ತ್ರಿಪಾಠಿ ಆಗ್ರಹ
ಲಖನೌ, ನ. 25– ವಿಧಾನಸಭೆಯಲ್ಲಿ ತಾವು ಬಹುಮತ ಕಳೆದುಕೊಂಡಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದರೂ ಭಾನುವಾರ ಸಂಪುಟವನ್ನು ವಿಸ್ತರಿಸಿ ಮುಖ್ಯಮಂತ್ರಿ ಸಿ.ಬಿ. ಗುಪ್ತಾರವರು ತಪ್ಪೆಸಗಿದ್ದಾರೆಂದು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಉತ್ತರ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷ ಕಮಲಾಪತಿ ತ್ರಿಪಾಠಿಯವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕೂಡಲೇ ವಿಧಾನಸಭೆ ಅಧಿವೇಶನವನ್ನು ಕರೆದು ವಿಶ್ವಾಸಮತ ಪಡೆಯುವಂತೆ ಮುಖ್ಯಮಂತ್ರಿಗೂ ಪತ್ರ ಬರೆಯುವುದಾಗಿ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.