ಪೌರಸಮಿತಿಯ ಲಂಚ ನಿರೋಧ ಚಳವಳಿಯಿಂದ ಸಾಕಷ್ಟು ಫಲ: ನಾಗಣ್ಣ
ಬೆಂಗಳೂರು, ಸೆ. 17– ಪೌರ ಸಮಿತಿಯು ಆರಂಭಿಸಿದ ‘ಕಾರ್ಪೊರೇಷನ್ನಿನಲ್ಲಿ ಲಂಚ ನಿರೋಧ’ ಚಳವಳಿಯು ಸಾಕಷ್ಟು ಫಲ ನೀಡಿದೆಯೆಂದು ಇಂದು ತಿಳಿಸಿದ ಪೌರ ಸಮಿತಿಯ ಅಧ್ಯಕ್ಷ ಶ್ರೀ ಕೆ.ಎಂ.ನಾಗಣ್ಣನವರು, ‘ಇನ್ನೂ ಉಳಿದಿರುವ ಲಂಚಕೋರ ಅಧಿಕಾರಿಗಳು ಕಾರ್ಪೊರೇಷನ್ನಿಂದ ಹೋಗುವವರೆಗೆ’ ಚಳವಳಿ ಮುಂದುವರಿಯುವುದೆಂದು ತಿಳಿಸಿದರು.
ಚಳವಳಿ ಆರಂಭವಾಗಿ (ರಜಾ ದಿನಗಳನ್ನು ಬಿಟ್ಟು) ನಾಳೆಗೆ ನೂರು ದಿನ. ನೂರು ದಿನ ನಡೆದ ಸಂಕೇತವಾಗಿ ನಾಳೆ ಸಂಜೆ ಪೌರ ಸಮಿತಿಯ ಆಶ್ರಯದಲ್ಲಿ ‘ಲಂಚ ದೈತ್ಯ’ನನ್ನು ದಹಿಸಲಾಗುವುದು.
ಹೆದ್ದಾರಿ ನಿರ್ಮಾಣ, ದುರಸ್ತಿಗೆ ರಾಜ್ಯ ಮಟ್ಟದ ವ್ಯವಸ್ಥೆ ಅಗತ್ಯ– ರಘುರಾಮಯ್ಯ
ಬೆಂಗಳೂರು, ಸೆ. 17– ಹೆದ್ದಾರಿಗಳ ನಿರ್ಮಾಣ ಹಾಗೂ ದುರಸ್ತಿಗಳನ್ನು ನೋಡಿಕೊಳ್ಳಲು, ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಂಘಟನೆಯಿರಬೇಕಾದ ಅವಶ್ಯಕತೆಯನ್ನು ಕೇಂದ್ರ ಸಂಸದೀಯ ಹಾಗೂ ಸಾರಿಗೆ ಸಚಿವ ಶ್ರೀ ಕೆ. ರಘುರಾಮಯ್ಯ ಪ್ರತಿಪಾದಿಸಿದರು.
ವಿಳಂಬಗಳ ನಿವಾರಣೆ, ದಕ್ಷತೆಯ ವರ್ಧನೆ, ಮಿತವ್ಯಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಪರಿಶ್ರಮ ಬರಿಸುವ ದೃಷ್ಟಿಯಿಂದ ಈ ರೀತಿಯ ಪ್ರತ್ಯೇಕ ನಿರ್ವಹಣಾ ಸಂಸ್ಥೆಗಳು ಅಗತ್ಯ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.