ADVERTISEMENT

ಸೋಮವಾರ, 22–8–1994

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:46 IST
Last Updated 21 ಆಗಸ್ಟ್ 2019, 19:46 IST
   

ಭದ್ರಾವತಿಯಲ್ಲಿ ಗಲಭೆ, ಗೋಲಿಬಾರ್: 1 ಸಾವು

ಶಿವಮೊಗ್ಗ, ಆ. 21– ಇಲ್ಲಿಗೆ ಸಮೀಪದ ಭದ್ರಾವತಿಯಲ್ಲಿ ಇಂದು ಬೆಂಕಿ ಹಚ್ಚುವಿಕೆ ಹಾಗೂ ಲೂಟಿಯಲ್ಲಿ ನಿರತರಾದ ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ.

ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಲ್ಲಿ ಒಬ್ಬ ವ್ಯಕ್ತಿಗೆ ತಲೆಗೆ ಏಟು ಬಿದ್ದಿದ್ದು ಬೆಂಗಳೂರಿನ ನಿಮ್ಹಾನ್ಸ್‌ಗೆ ಒಯ್ಯಲಾಗಿದೆ.

ADVERTISEMENT

ಕೈಗಾರಿಕಾ ನಗರವಾದ ಭದ್ರಾವತಿಯಲ್ಲಿ ಇಂದು ಮಧ್ಯಾಹ್ನ ಪ್ರಾರಂಭವಾದ ಗಲಭೆ ರಾತ್ರಿಯೂ ಮುಂದುವರಿದಿದ್ದು ಪರಿಸ್ಥಿತಿ ಇನ್ನೂ ಉದ್ರಿಕ್ತವಾಗಿಯೇ ಇದೆ. ನಗರದಲ್ಲಿ ಬೆಂಕಿ ಹಚ್ಚುವ ಹಾಗೂ ಅಂಗಡಿಗಳನ್ನು ಲೂಟಿ ಮಾಡುವ ಕಾರ್ಯ ರಾತ್ರಿ ಬಹುಹೊತ್ತಿನವರೆಗೆ ನಡೆದಿತ್ತು.

ಪಾಕ್‌ಗೆ ರಷ್ಯ ಅಣು ವಿಜ್ಞಾನಿಗಳು?

ಮಾಸ್ಕೊ, ಆ. 21– (ಯುಎನ್‌ಐ)–ಪಾಕಿಸ್ತಾನವು ಪರಮಾಣು ಅಸ್ತ್ರ ತಯಾರಿಕೆ ಮಟ್ಟದ ಪ್ಲುಟೋನಿಯಂ ಕಳ್ಳಸಾಗಣೆ ನಡೆಸಿರುವುದರಿಂದಾಗಿ ಹಿಂದಿನ ಸೋವಿಯತ್ ಒಕ್ಕೂಟದ ಅಣು ವಿಜ್ಞಾನಿಗಳು ಪಾಕಿಸ್ತಾನಕ್ಕೆ ವಲಸೆ ಹೋಗುವ ಸಾಧ್ಯತೆಗಳಿವೆ ಎಂದು ರಷ್ಯದ ಜನಪ್ರಿಯ ಪತ್ರಿಕೆ ‘ಇಜ್ವೆಸ್ತಿಯಾ’ ಎಚ್ಚರಿಕೆ ನೀಡಿದೆ.

ಪರಮಾಣು ಅಸ್ತ್ರ ತಯಾರಿಕೆಯಲ್ಲಿ ತನ್ನ ವಿಜ್ಞಾನಿಗಳು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಪಾಕಿಸ್ತಾನ ಈಗ ವಿದೇಶಿ ತಜ್ಞರ ಸಲಹೆಗಾಗಿ ಎದುರು ನೋಡುತ್ತಿದ್ದೆ. ಅಸ್ತ್ರ ತಯಾರಿಕೆ ವಿಧಾನವನ್ನು ಅದು ಹಿಂದಿನ ಸೋವಿಯತ್ ಒಕ್ಕೂಟದ ವಿಜ್ಞಾನಿಗಳಿಂದ ತಿಳಿಯಲು ಯತ್ನಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಪತ್ರಿಕೆ ಹೇಳಿದೆ.

ಮೊದಲ ಬಾರಿ ತುಂಬಿದ ಸುಪಾ ಅಣೆ

ಕಾರವಾರ, ಆ. 21– ಸುಪಾ ಅಣೆಕಟ್ಟಿನ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಈ ಕ್ಷೇತ್ರದ ಶಾಸಕ ಪ್ರಭಾಕರರಾಣೆ ಅವರು ಕಾಳಿ ಪೂಜೆಯ ನಂತರ ವಿದ್ಯುತ್ ಗುಂಡಿ ಒತ್ತಿ ಕ್ರೆಸ್ಟ್‌ಗೇಟ್ ಅನ್ನು 15 ಸೆಂ.ಮೀ.ವರೆಗೆ ಎತ್ತಿದಾಗ ಸುಂದರ ಕಾಳಿ ಬಿಳಿಯಾಗಿ ಧುಮುಕಿ ನಯನ ಮನೋಹರ ದೃಶ್ಯ ಸೃಷ್ಟಿಯಾಗಿ ಸಹಸ್ರಾರು ಜನರ ಮನಸೂರೆಗೊಂಡಿತು.

ಸುಪಾ ಜಲಾಶಯದಲ್ಲಿ ನೀರು ಸಂಗ್ರಹಿಸುತ್ತ ವಿದ್ಯುತ್ ಉತ್ಪಾದನೆ ಮಾಡತೊಡಗಿ ಒಂಬತ್ತು ವರ್ಷಗಳಾದವು. ಭಾರತದ 10 ಬೃಹತ್ ಅಣೆಕಟ್ಟೆಗಳಲ್ಲಿ ಒಂದಾದ ಹಾಗೂ ಕೇರಳ, ಕರ್ನಾಟಕದ ಮತ್ತು ತಮಿಳುನಾಡುಗಳಲ್ಲಿ ಅತ್ಯಂತ ದೊಡ್ಡದಾದ ಅಣೆಕಟ್ಟು ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.