ADVERTISEMENT

25 ವರ್ಷಗಳ ಹಿಂದೆ | ಗುರುವಾರ 3–8–1995

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 19:30 IST
Last Updated 2 ಆಗಸ್ಟ್ 2020, 19:30 IST

ಅಪಸ್ವರದ ನಡುವೆ ನಾಯ್ಕರ್‌ ಅಧಿಕಾರ ಸ್ವೀಕಾರ

ಬೆಂಗಳೂರು, ಆ. 2– ಅಧಿಕಾರ ಹಸ್ತಾಂತರ ಮಾಡಲು ಬರಬೇಕಾಗಿದ್ದ ಪ್ರದೇಶ ಕಾಂಗೈ ಸಮಿತಿಯ (ಪಿಸಿಸಿ) ಹಾಲಿ ಅಧ್ಯಕ್ಷ ವಿ. ಕೃಷ್ಣರಾವ್‌ ಸೇರಿದಂತೆ ಪ್ರಮುಖ ಪದಾಧಿಕಾರಿ ನಾಯಕರುಗಳನೇಕರ ಗೈರುಹಾಜರಿಯಲ್ಲಿ ಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ. ನಾಯ್ಕರ್‌ ಇಂದು ಇಲ್ಲಿಯ ಅರಮನೆ ಆವರಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಅಧಿಕಾರ ಸ್ವೀಕರಿಸಿದರು.

ಅದೇ ಕಾಲಕ್ಕೆ ಕಾಂಗೈ ಹೈಕಮಾಂಡ್‌ ನೂತನವಾಗಿ ರಚಿಸಿರುವ ಪದಾಧಿಕಾರಿಗಳ ಪಟ್ಟಿಯಲ್ಲಿ ಇರುವ ಹಲವರ ಗೈರುಹಾಜರಿ ಎದ್ದುಕಾಣುವಂತಾಗಿ, ಇದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅನೇಕ ಮುಖಂಡರು ಮತ್ತು ಕಾರ್ಯಕರ್ತರ ಹುಬ್ಬು ಮೇಲೇರುವಂತೆ ಮಾಡಿತು.

ADVERTISEMENT

ರಾಜ್ಯದ ಕಾಂಗ್ರೆಸ್‌ ಪಾಲಿಗೆ ಆಷಾಢ (ದುರ್ದಿನ) ಕಳೆದಿದ್ದು ‘ಶ್ರಾವಣ’ (ಸುದಿನ) ಆರಂಭವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗೈ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಸ್‌.ಎಂ. ಕೃಷ್ಣ ಇಂದು ಇಲ್ಲಿ ವಿಶ್ಲೇಷಿಸಿದರು.

ಕನ್ನಡ ಮಾಧ್ಯಮ ರಿಟ್‌; ಗಣ್ಯರ ಜತೆ ಚರ್ಚೆ

ಬೆಂಗಳೂರು, ಆಗಸ್ಟ್‌ 2– ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಕನ್ನಡದಲ್ಲೇ ಆಗಬೇಕು ಎಂದು ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಹೊರಡಿಸಿದ ಆಜ್ಞೆ ಸಂಬಂಧದ ಪ್ರಕರಣದಲ್ಲಿ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆಗೆ ವಿಶೇಷ ವಕೀಲರನ್ನು ನೇಮಿಸಲು ರಾಜ್ಯ ಸರ್ಕಾರ ಆಲೋಚಿಸುತ್ತಿದೆ.

ಶಾಂತಿಭೂಷಣ್‌ ಅವರನ್ನು ವಿಶೇಷ ವಕೀಲರನ್ನಾಗಿ ನೇಮಿಸುವ ಬಗ್ಗೆ ಪರಿಶೀಲಿಸುತ್ತಿದ್ದು, ಸುಪ್ರೀಂ ಕೋರ್ಟ್‌ ಮುಂದಿರುವ ಈ ರಿಟ್‌ ಅರ್ಜಿಯ ಬಗ್ಗೆ ತುರ್ತಾಗಿ ಮುಂದಿನ ಕ್ರಮ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.