ADVERTISEMENT

ಬುಧವಾರ, 17–6–1970

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 19:30 IST
Last Updated 16 ಜೂನ್ 2020, 19:30 IST

ಬಹಿರಂಗವಾಗಿ ಕಾಣಿಸಿಕೊಂಡ ಮಜುಂದಾರ್‌

ಮಾಂಘೇರ್‌ (ಬಿಹಾರ), ಜೂನ್‌ 16– ಇನ್ನೂ ‍ಪೊಲೀಸರ ಕೈಗೆ ಸಿಕ್ಕದಿರುವ ನಕ್ಸಲೀಯರ ಸರ್ವೋಚ್ಚ ನಾಯಕ ಚಾರು ಮಜುಂದಾರ್‌ ಅವರು, ಭಾಗಶಃ ಪತ್ರಕರ್ತರೂ ಆಗಿರುವ ಇಲ್ಲಿನ ವಕೀಲರೊಬ್ಬರ ಮನೆಯಲ್ಲಿ ಕಾಣಿಸಿಕೊಂಡು ಚಹಾ ಕುಡಿದು ಕೆಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಕಾಣಿಸಿಕೊಂಡಷ್ಟೇ ವಿಸ್ಮಯಕಾರಕವಾಗಿ ಮರೆಯಾದರೆಂದು ವರದಿಯಾಗಿದೆ.

ಸ್ವಂತ ಅಂಗರಕ್ಷಕರನ್ನು ಹೊಂದಿರುವ ಶ್ರೀ ಮಜುಂದಾರ್‌ ಅವರು ಆ ವಕೀಲರಿಗೆ ರಾಂಚಿಯಲ್ಲಿ ಸೊಭೇಂದು ಬ್ಯಾನರ್ಜಿ ಎಂಬ ಹೆಸರಿನಿಂದ ಪರಿಚಯವಾದರು. ನಕ್ಸಲೀಯ ನಾಯಕನ ಚಹರೆ ಕುರಿತ ಪೊಲೀಸರ ವರ್ಣನೆಗೆ ಅವರು ಹೊಂದುವಂತಿದ್ದರು. ಕೃಶರಾಗಿದ್ದ ಅವರು ಅನಾರೋಗ್ಯದಿಂದ ಇರುವಂತಿತ್ತು.

ADVERTISEMENT

ಭದ್ರಾವತಿಯಲ್ಲಿ ಹೊಸ ವಿದ್ಯುತ್‌ ಬೀಡು ಕಬ್ಬಿಣ ಕುಲುಮೆ ಉದ್ಘಾಟನೆ

ಭದ್ರಾವತಿ, ಜೂನ್‌ 16– ಸಂಜೆಯ ತುಂತುರು ಮಳೆಯ ತಂಪು ವಾತಾವರಣದಲ್ಲಿ ರಾಜ್ಯಪಾಲ ಶ್ರೀ ಧರ್ಮವೀರ ಅವರು ಗುಂಡಿ ಒತ್ತಿದಾಗ, ಭಾರತದಲ್ಲೇ ಅತ್ಯಂತ ಭಾರಿ ವಿದ್ಯುತ್ ಕುಲುಮೆ ಕೆಲಸ ಆರಂಭಿಸಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮತ್ತೊಂದು ಭಾರಿ ಹೆಜ್ಜೆ ಇಟ್ಟಿತು.

ಆನಂತರ ನಡೆದ ಸಮಾರಂಭದಲ್ಲಿ ಕುಮಾರಿಯರಿಬ್ಬರು ‘ಹತ್ತಿತೋ ಹತ್ತಿತು ಕನ್ನಡದ ದೀಪ’ ಎಂದು ಹಾಡಿದರು. 1.2 ಲಕ್ಷ ಟನ್‌ ಬೀಡು ಕಬ್ಬಿಣ ಉತ್ಪಾದಿಸುವ ಎರಡು ಕುಲುಮೆಗಳ ಕಾರ್ಯಾರಂಭದಿಂದ ಕಾರ್ಖಾನೆಯ ಬೀಡು ಕಬ್ಬಿಣದ ಉತ್ಪತ್ತಿ 2 ಲಕ್ಷ ಟನ್‌ಗಳಿಗಿಂತ ಹೆಚ್ಚಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.