
ಬೆಂಗಳೂರು, ಫೆ. 26– ಆಟ ಆಡಲು ಹೋದ ಮೈಸೂರು ವಿಭಾಗಾಧಿಕಾರಿ ಎಚ್. ಭಾಸ್ಕರ್ ಅವರ ಇಬ್ಬರು ಪುತ್ರರು ಸೇರಿದಂತೆ ಒಟ್ಟು ನಾಲ್ಕು ಮಂದಿ ಬಾಲಕರು ಕಳೆದ ಶನಿವಾರದಿಂದ (ಫೆ. 24) ನಾಪತ್ತೆಯಾಗಿದ್ದಾರೆ.
ಭಾಸ್ಕರ್ ಪುತ್ರರಾದ ಅಂಚಿತ್ (13) ಹಾಗೂ ಅಬಿನಿತ್ (11) ಕಾಣೆಯಾಗಿರುವ ಮಕ್ಕಳು. ಇವರ ಜತೆ ಪಕ್ಕದ ಮನೆಯ ಡಾ. ನಾರಾಯಣ ಎಂಬುವರ ಮಗ ಎಂ.ವಿ. ರಾಜು (11) ಮತ್ತು ವೇಲು ಎಂಬುವರ ಮಗ ವಿಶಾಲ್ (13) ಕೂಡ ನಾಪತ್ತೆಯಾಗಿದ್ದಾನೆ. ಭಾಸ್ಕರ್ ಅವರ ಪತ್ನಿ ಜಯನಗರ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಕೆಲವರು ಅಪಹರಣ ಎಂದು ಬಣ್ಣಿಸಿದ್ದು, ಅದನ್ನು ಪೊಲೀಸರು ನಿರಾಕರಿಸಿದ್ದಾರೆ.
ಸಿಡ್ನಿ, ಫೆ. 26– ವಿಶ್ವ ಕ್ರಿಕೆಟ್ ರಂಗದ ಅನರ್ಘ್ಯ ರತ್ನ ಸರ್ ಡೊನಾಲ್ಡ್ ಬ್ರಾಡ್ಮನ್ ಇನ್ನಿಲ್ಲ. ಅರ್ಧ ಶತಮಾನದ ಹಿಂದೆ ವಿಶ್ವ ಕ್ರಿಕೆಟ್ ರಂಗದಲ್ಲಿ ತಾನೇ ತಾನಾಗಿ ಮೆರೆದಿದ್ದ ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಬ್ರಾಡ್ಮನ್ ಭಾನುವಾರ ಅಡಿಲೇಡ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 92 ವರ್ಷ ವಯಸ್ಸಾಗಿತ್ತು. 1927ರಲ್ಲಿ ಮೊದಲ ದರ್ಜೆ ಕ್ರಿಕೆಟ್ನಲ್ಲಿ ಆಡಲು ಇಳಿದ ಬ್ರಾಡ್ಮನ್ ನಂತರ 21 ವರ್ಷ ದಾಖಲೆ ಮಾಡುತ್ತಾ ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.