
ಹುಬ್ಬಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾಪನೆ
ಬೆಂಗಳೂರು, ಫೆ. 4– ಮಾಹಿತಿ ತಂತ್ರಜ್ಞಾನದ ಉನ್ನತ ಶಿಕ್ಷಣದ ಸೌಲಭ್ಯ ಉತ್ತರ ಕರ್ನಾಟಕದ ಪ್ರತಿಭಾವಂತರಿಗೂ ದೊರೆಯುವಂತೆ ಮಾಡಲು ಪ್ರತಿಷ್ಠಿತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ–ಬಿ) ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ತಿಳಿಸಿದರು.
ನಗರದಲ್ಲಿ ನಡೆದ ‘ಐಐಐಟಿ–ಬಿ’ಯ ಪ್ರಥಮ ಘಟಿಕೋತ್ಸವ ಉದ್ಘಾಟಿಸಿ ಈ ವಿಷಯ ತಿಳಿಸಿದ ಅವರು, ಇದಕ್ಕಾಗಿ ಸರ್ಕಾರ ಸಂಸ್ಥೆಗೆ ಹುಬ್ಬಳ್ಳಿಯಲ್ಲಿ 30,000 ಚದರ ಅಡಿ ಜಮೀನು ಜೊತೆಗೆ ಒಂದು ಬಾರಿಯ ಮೂಲ ನಿಧಿ ನೀಡಲಿದೆ ಎಂದು ಪ್ರಕಟಿಸಿದರು.
***
ಬೆಳೆಹಾನಿ: ಕೊಪ್ಪಳ ಹತ್ತಿ ಬೆಳೆಗಾರನ ಆತ್ಮಹತ್ಯೆ
ಕೊಪ್ಪಳ, ಫೆ. 4– ಬೆಳೆಹಾನಿ ನಷ್ಟ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವಿವಿಧೆಡೆ ವರದಿಯಾಗುತ್ತಿರುವ ಬೆನ್ನಲ್ಲೇ, ಕೊಪ್ಪಳ ಜಿಲ್ಲೆಯಲ್ಲೂ ಹತ್ತಿ ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಈತನನ್ನು ಕೊಪ್ಪಳ ತಾಲೂಕಿನ ಚುಕ್ಕಣಕಲ್ಲದ ನಿವಾಸಿ ಚನ್ನಬಸಪ್ಪ ಹೂಗಾರ (50) ಎಂದು ಗುರುತಿಸಲಾಗಿದೆ. ಚನ್ನಬಸಪ್ಪ ಹೂಗಾರ ತನ್ನ ಹೊಲದಲ್ಲಿ ಹೈಬ್ರಿಡ್ ಹತ್ತಿ ಬೆಳೆದಿದ್ದು ಕಾವೇರಿ ಸೀಡ್ಸ್ ಕಂಪನಿಯಿಂದ ಬೀಜ ಪಡೆದಿದ್ದರು. ಅವರಿಗೆ ಹೆಣ್ಣು ಮತ್ತು ಗಂಡು ಬೀಜ ನೀಡುವ ಬದಲಾಗಿ ಕೇವಲ ಹೆಣ್ಣು ಬೀಜ ಕೊಡಲಾಗಿತ್ತು. ಪರಿಣಾಮವಾಗಿ ಬೆಳೆ ಪೂರ್ತಿ ಫಸಲು ಬಾರದೆ ನಷ್ಟವಾಯಿತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.