‘ಜನರನ್ನು ತಿದ್ದಬೇಕು, ಸಂವಿಧಾನವನ್ನಲ್ಲ’
ಬೆಂಗಳೂರು, ಜುಲೈ 23– ‘ದೇಶದ ಏಕತೆ ಮತ್ತು ಭಾವೈಕ್ಯವನ್ನು ಉಳಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವಿಲ್ಲ. ಬದಲಾಗಿ, ಜನರು ತಮ್ಮನ್ನು ತಾವೇ ತಿದ್ದಿಕೊಳ್ಳಬೇಕು’ ಎಂದು ರಾಷ್ಟ್ರದ ಪ್ರಮುಖ ಆಡಳಿತಗಾರರು, ಬುದ್ಧಿಜೀವಿಗಳು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ಅಭಿಪ್ರಾಯಪಡಲಾಯಿತು.
ಫೌಂಡೇಷನ್ ಫಾರ್ ಅಮಿಟಿ ಆ್ಯಂಡ್ ನ್ಯಾಷನಲ್ ಸಾಲಿಡಾರಿಟಿ ಮತ್ತು ಲೋಕಸ್ವರಾಜ್ ಆಂದೋಲನ್ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ವಸಂತ ಸಾಠೆ ಮಾತನಾಡಿದರು.
‘ದೇಶದ ಭಾವೈಕ್ಯವನ್ನು ಉಳಿಸಿಕೊಳ್ಳಲು ಸಂವಿಧಾನಕ್ಕೆ ಸಣ್ಣಪುಟ್ಟ ತಿದ್ದುಪಡಿಗಳನ್ನು ಬೇಕಿದ್ದರೆ ತರಬಹುದು. ಆದರೆ ಯಾವುದೇ ಪ್ರಮುಖತಿದ್ದುಪಡಿಗಳನ್ನು ತರುವ ಅಗತ್ಯವಿಲ್ಲ. ಈ ದೇಶದ ಅನಕ್ಷರಸ್ಥರು ಅವಿದ್ಯಾವಂತರಲ್ಲ. ಆದರೆ ಅಕ್ಷರಸ್ಥರು ನೈತಿಕ ಮೌಲ್ಯ ಕಳೆದುಕೊಂಡು ಅವಿದ್ಯಾವಂತರಾಗಿದ್ದಾರೆ’ ಎಂದು ಹೇಳಿದರು.
ಒಬ್ಬ ಒತ್ತೆಯಾಳಿನ ಸ್ಥಿತಿ ಚಿಂತಾಜನಕ
ಶ್ರೀನಗರ, ಜುಲೈ 23 (ಪಿಟಿಐ, ಯುಎನ್ಐ)– ಗಾಯಗೊಂಡ ಇಬ್ಬರು ಒತ್ತೆಯಾಳುಗಳಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಐವರು ವಿದೇಶಿ ಪ್ರವಾಸಿಗರನ್ನು ಒತ್ತೆಸೆರೆ ಇಟ್ಟುಕೊಂಡಿರುವ ಅಲ್ ಫರಾನ್ ಗುಂಪು ಹೇಳಿದ್ದು, ಒತ್ತೆಯಾಳುಗಳಲ್ಲಿ ಯಾರೇ ಆದರೂ ಅಸ್ವಸ್ಥರಾಗಿದ್ದರೆ ಅವರಿಗೆ ತುರ್ತು ಚಿಕಿತ್ಸೆ ಒದಗಿಸುವುದಕ್ಕಾಗಿ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.