ಪುನರ್ರಚಿತ ಕೆಪಿಸಿಸಿ: ಅತೃಪ್ತಿ
ನವದೆಹಲಿ, ಆ. 5– ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ರಚಿಸಿದ ರೀತಿಯನ್ನು ಆ ಪಕ್ಷದ ಕರ್ನಾಟಕದ ಬಹುತೇಕ ಸಂಸತ್ ಸದಸ್ಯರು ತೀವ್ರವಾಗಿ ಟೀಕಿಸಿದ್ದಾರೆ.
ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಕೆಪಿಸಿಸಿ ಪುನರ್ರಚನೆಗೆ ಒಂದು ದಿನ ಮುಂಚೆ ಸೂರಜ್ಕುಂಡ್ನಲ್ಲಿ ಮಾಡಿದ ಭಾಷಣಕ್ಕೆ ವಿರುದ್ಧವಾಗಿಯೇ ಈ ಸಮಿತಿ ಇದೆ ಎಂದಿದ್ದಾರೆ. ಕೆಲವು ನಾಯಕರ ಮಕ್ಕಳಿಗೆ ಪದಾಧಿಕಾರಿ ಹುದ್ದೆಗಳನ್ನು ನೀಡಿರುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೇ ಹೆಚ್ಚಿನ ಸ್ಥಾನ ನೀಡಲಾಗಿದೆ ಎಂದು ಹಲವರು ಟೀಕಿಸಿ, ಇದು ‘ಮಂಗಳೂರು ಪ್ರಾದೇಶಿಕ ಕಾಂಗ್ರೆಸ್ ಸಮಿತಿ’ ಎಂದು ವ್ಯಂಗ್ಯವಾಡಿದ್ದಾಗಿ ಗೊತ್ತಾಗಿದೆ.
ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ರಾಜ್ಯ ಅನುಮತಿ
ಬೆಂಗಳೂರು, ಆ. 5– ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳಲು ರಾಜ್ಯ ಸಚಿವ ಸಂಪುಟ ಇಂದು ತೀರ್ಮಾನಿಸಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ ಸೂಚನೆಯ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯಗಳಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜುಗಳಿಗೆ ಅವಕಾಶವಿದೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಿ, ಕರ್ನಾಟಕ ಸೇರಿದಂತೆ ದೇಶದಲ್ಲಿ 33 ಹೊಸ ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯಲು ಸಾಧ್ಯವಿದೆ ಎಂದು ಮಂಡಲಿ ಸೂಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.