ADVERTISEMENT

ಸೋಮವಾರ, 21–3–1994

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:23 IST
Last Updated 20 ಮಾರ್ಚ್ 2019, 20:23 IST

ಕಾಶ್ಮೀರ– ಆಡಳಿತ ಪುನರ್ರಚನೆ ಶೀಘ್ರ

ನವದೆಹಲಿ, ಮಾ. 20 (ಯುಎನ್‌ಐ, ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಪ್ರಜಾತಂತ್ರ ವ್ಯವಸ್ಥೆಗಳನ್ನು ಪುನರ್‌ಸ್ಥಾಪಿಸುವ ನಿಟ್ಟಿನಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಸದ್ಯದಲ್ಲೇ ಸಮಗ್ರವಾಗಿ ಪುನರ್ರಚಿಸುವ ಸಂಭವವಿದೆ.

ಈ ಮಧ್ಯೆ ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ತ್ವರಿತಗೊಳಿಸಲು ಜಮ್ಮು ಮತ್ತು ಕಾಶ್ಮೀರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯು ನಾಳೆ ಇಲ್ಲಿ ನಡೆಯುವುದು.

ADVERTISEMENT

ಸಮಸ್ಯೆ ಸ್ಥಗಿತಕ್ಕೆ ಅಮೆರಿಕ ಒಲವು

ಲಂಡನ್, ಮಾ. 20 (ಪಿಟಿಐ)– ಕಾಶ್ಮೀರ ಸಮಸ್ಯೆಯು ಸದ್ಯಕ್ಕೆ ಬಗೆಹರಿಸಬಲ್ಲಂತಹ ವಿಷಯವಲ್ಲ ಎಂದು ಹೇಳಿ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಮೆರಿಕ ಉದ್ದೇಶಿಸಿದೆ. ಕಾಶ್ಮೀರ ವಿಷಯಕ್ಕಿಂತಲೂ ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಅಮೆರಿಕ ಹೆಚ್ಚಿನ ಮಹತ್ವ ನೀಡುತ್ತಿರುವುದಾಗಿ ವಾಷಿಂಗ್‌ಟನ್‌ನ ಮಾಧ್ಯಮಗಳ ವರದಿಗಳು ಸೂಚಿಸಿವೆ.

ಭಾರತ, ಪಾಕಿಸ್ತಾನ, ಜರ್ಮನಿ, ಜಪಾನ್ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯರಾಗಿರುವ ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾಗಳನ್ನೊಳಗೊಂಡ ಪ್ರಾದೇಶಿಕ ಭದ್ರತಾ ಸಮ್ಮೇಳನವೊಂದನ್ನು ಕರೆಯಬೇಕೆಂಬುದು ಅಮೆರಿಕದ ರಾಜ್ಯಾಂಗ ಇಲಾಖೆಯ ಉದ್ದೇಶವಾಗಿದೆ. ಈ ಸಮ್ಮೇಳನದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಅಮೆರಿಕ ಭಾವಿಸಿರುವುದಾಗಿ ವರದಿಗಳು ಹೇಳಿವೆ.

ಪಾಕ್‌ನಿಂದ ಮುಂಬೈ ಕಾನ್ಸುಲೇಟ್ ಬಂದ್

ಇಸ್ಲಾಮಾಬಾದ್, ಮಾ. 20 (ಪಿಟಿಐ)– ಮುಂಬಯಿಯಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಯನ್ನು ಇಂದು ಪಾಕಿಸ್ತಾನ ಮುಚ್ಚಿತು.

ಇತ್ತೀಚೆಗೆ ತಾನೇ ಆರಂಭವಾಗಿದ್ದ ಈ ಕಾನ್ಸುಲೇಟ್ ಕಚೇರಿಯನ್ನು ದಿಢೀರನೆ ಮುಚ್ಚುತ್ತಿರುವುದಕ್ಕೆ ‘ಭಾರತದ ಅಸಹಕಾರ ಕಾರಣ’ ಎಂದು ಪಾಕ್ ವಿದೇಶಾಂಗ ಕಚೇರಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.