ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶನಿವಾರ, 15–5–1996

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:30 IST
Last Updated 17 ಮೇ 2021, 19:30 IST
   

ಸ್ಪೀಕರ್‌ ಹುದ್ದೆಗೆ ಸಮಾನ ಅಭ್ಯರ್ಥಿ ತೃತೀಯ ರಂಗ– ಕಾಂಗ್ರೆಸ್‌ ನಿರ್ಧಾರ

ನವದೆಹಲಿ, ಮೇ, 17 (ಪಿಟಿಐ)– ಲೋಕಸಭೆಯಲ್ಲಿ ಸ್ಪೀಕರ್‌ ಹುದ್ದೆಗೆ ತೃತೀಯ ರಂಗ ಮತ್ತು ಕಾಂಗ್ರೆಸ್‌ ಪಕ್ಷಗಳ ಸಹಿತ ಎಲ್ಲ ವಿರೋಧ ಪಕ್ಷಗಳ ಸಮಾನ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುವ ಮಹತ್ವದ ಬೆಳವಣಿಗೆ ಇಂದು ನಡೆದಿದೆ. ಈ ಮಧ್ಯೆ ವಾಜಪೇಯಿ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ತನ್ನ ಸಂಸತ್‌ ಸದಸ್ಯರಿಗೆ ‘ವಿಪ್‌’ ನೀಡಲೂ ಕಾಂಗ್ರೆಸ್‌ ನಿರ್ಧರಿಸಿದೆ.

ನವದೆಹಲಿಯಲ್ಲಿ ಇಂದು ತೃತೀಯ ರಂಗದ ಸಭೆ ಒಂದೆಡೆ ನಡೆದರೆ, ಇನ್ನೊಂದೆಡೆ ಕಾಂಗ್ರೆಸ್‌ ಕಾರ್ಯಕಾರಿಣಿಯ ಅನೌಪಚಾರಿಕ ಸಭೆ ನಡೆಯಿತು. ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಸ್ಪೀಕರ್‌ ಹುದ್ದೆಗೆ ಏಕ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

ADVERTISEMENT

ತೃತೀಯ ರಂಗದ ಸಭೆಯಲ್ಲಿ ಕೂಡಾ ಸ್ಪೀಕರ್‌ ಹುದ್ದೆಗೆ ಅಭ್ಯರ್ಥಿಯನ್ನು ನಿಲ್ಲಿಸುವ ಮುನ್ನ ಕಾಂಗ್ರೆಸ್‌ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಬಹುಮತ: ರಾಷ್ಟ್ರಪತಿಗೆ ಮನವರಿಕೆ

ನವದೆಹಲಿ, ಮೇ 17– ತೃತೀಯ ರಂಗದ ಪ್ರಧಾನಿ ಅಭ್ಯರ್ಥಿಯಾಗಿರುವ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ
ಅವರು ಇಂದು ರಾಷ್ಟ್ರಪತಿ ಡಾ. ಶಂಕರ
ದಯಾಳ ಶರ್ಮಾ ಅವರನ್ನು ಭೇಟಿಯಾಗಿ, ತಮಗಿರುವ ಬೆಂಬಲವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆಂದು ಗೊತ್ತಾಗಿದೆ.

ಬಿಜೆಪಿ ನಾಯಕ ವಾಜಪೇಯಿ ಅವರನ್ನುಸರ್ಕಾರ ರಚಿಸಲು ಆಮಂತ್ರಿಸಿ
ದ್ದರಿಂದ ತೃತೀಯ ರಂಗದ ಕೆಲವು ನಾಯಕರು ಮಾಡಿರುವ ಟೀಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.