ಇಂದು ಜನತಾ ದಳ ಸರ್ಕಾರ ಪ್ರಮಾಣ
ಬೆಂಗಳೂರು, ಡಿ. 10– ಐದು ವರ್ಷಗಳ ‘ವನವಾಸ’ದ ನಂತರ ಪುನಃ ರಾಜ್ಯದ ಚುಕ್ಕಾಣಿ ಹಿಡಿಯಲು ತಯಾರಿ ನಡೆಸಿರುವ ಜನತಾದಳದ ಶಾಸಕಾಂಗ ಪಕ್ಷದ ಸಭೆ ನಾಳೆ ನಗರದಲ್ಲಿ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಪಕ್ಷದ ಈ ಮಹತ್ವದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಪಟ್ಟ ಯಾರದು ಎಂಬುದು ನಿರ್ಧಾರವಾಗಲಿದೆ.
ಜನತಾದಳ ಮತ್ತು ಬಿಜೆಪಿ ನಡುವೆ ಸಿಕ್ಕಿ ದೂಳೀಪಟವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಸಂಪುಟ ಸಭೆ ನಂತರ ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರಿಗೆ ಸಚಿವ ಸಂಪುಟದ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು.
ಕಾಂಗೈಗೆ ಕೇವಲ 1 ಸ್ಥಾನ
ಬೆಂಗಳೂರು, ಡಿ. 10– ನಗರದ 12 ವಿಧಾನಸಭಾ ಕ್ಷೇತ್ರಗಳ ಪೈಕಿ ಜನತಾದಳ ಆರರಲ್ಲಿ ಹಾಗೂ ಬಿಜೆಪಿ ನಾಲ್ಕರಲ್ಲಿ ವಿಜಯ ಸಾಧಿಸಿದ್ದು ಹತ್ತು ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.