
ಸರಾಯ್ಬಂಜಾರಾ (ಪಂಜಾಬ್), ಡಿ. 2– ಅಂಬಾಲಾದಿಂದ 40 ಕಿ.ಮೀ. ದೂರವಿರುವ ಇಲ್ಲಿ ಇಂದು ಬೆಳಿಗ್ಗೆ ಹಳಿತಪ್ಪಿ ನಿಂತಿದ್ದ ಸರಕು ಸಾಗಾಣಿಕೆ ರೈಲಿಗೆ ಅಮೃತಸರ್ ಹೌರಾ ಮೇಲ್ ಡಿಕ್ಕಿ ಹೊಡೆದಾಗ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 40 ಮಂದಿ ಮೃತರಾಗಿದ್ದು, ಸುಮಾರು 150 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಇಪ್ಪತ್ತೆರಡು ಜನರು ಸ್ಥಳದಲ್ಲೇ ಮೃತರಾದರೆ ಫತೇಹಗಢ ಸಾಹಿಬ್, ರಾಜಪುರ ಮತ್ತು ಪಟಿಯಾಲದ ಆಸ್ಪತ್ರೆಗೆ ಸೇರಿಸಲಾಗಿದ್ದ ಗಾಯಾಳುಗಳಲ್ಲಿ ಇತರ ಕೆಲವರು ಮೃತರಾದರು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸತ್ತವರ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಡಿ. 2– ವೀರಪ್ಪನ್ನನ್ನು ಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಂಟಿ ಕಾರ್ಯ ತಂತ್ರ ರೂಪಿಸಿದ್ದು, ಗಡಿ ಭದ್ರತಾ ಪಡೆಯ 1,000 ಯೋಧರು ಮತ್ತು ಉಭಯ ರಾಜ್ಯಗಳ 2,000 ಸಿಬ್ಬಂದಿ ಸೇರಿ ಒಟ್ಟು 3,000 ಜನರ ಪಡೆ ಕಾರ್ಯಾಚರಣೆಯಲ್ಲಿ ತೊಡಗಲಿದೆ.
ಈ ನಡುವೆ ರಾಜ್ಯದ ವಿಶೇಷ ಕಾರ್ಯಾಚರಣೆ ಪಡೆ ಮುಖ್ಯಸ್ಥ ಎಚ್.ಟಿ. ಸಾಂಗ್ಲಿಯಾನ ಅವರಿಗೆ ನೆರವಾಗಲು ನೇಮಿಸಲಾಗಿದ್ದ ಡಿಐಜಿ ಕೆಂಪಯ್ಯ ಅವರನ್ನು ಕೈಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.