ಏಷ್ಯದ ದಾರಿದ್ರ್ಯ ನಿವಾರಣೆಗೆ ರಾಷ್ಟ್ರಪತಿ ಕರೆ
ನವದೆಹಲಿ, ಅ. 17– ಏಷ್ಯಾ ಹಾಗೂ ದೂರಪ್ರಾಚ್ಯ ರಾಷ್ಟ್ರಗಳಲ್ಲಿ ಸತತವಾಗಿ ಉಲ್ಬಣಗೊಳ್ಳುತ್ತಿರುವ ಹಸಿವು ಹಾಗೂ ಪೌಷ್ಟಿಕ ಆಹಾರ ಅಭಾವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿವಾರಿಸಲು ‘ಒಮ್ಮತದ ಬೃಹತ್ ಪ್ರಯತ್ನ’ ನಡೆಸಬೇಕೆಂದು ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ಅಂತರರಾಷ್ಟ್ರೀಯ ಸಮುದಾಯವನ್ನು ಆಗ್ರಹಪಡಿಸಿದರು.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ 11ನೇ ಪ್ರಾದೇಶಿಕ ಸಮ್ಮೇಳನವನ್ನು ಇಂದು ಇಲ್ಲಿ ಉದ್ಘಾಟಿಸಿದ ಗಿರಿ ಅವರು, ಮಾನವನ ಆರ್ಥಿಕ ಅಭಿವೃದ್ಧಿಗೆ ಇರುವ ಸಾಮರ್ಥ್ಯ ಹಾಗೂ ವಿಶ್ವದ ಈ ಭಾಗದಲ್ಲಿ ನೂರಾರು ಕೋಟಿ ಜನರು ನಡೆಸುತ್ತಿರುವ ಜೀವನ ವಿಧಾನಗಳ ಮಧ್ಯೆ ಇರುವ ಹಾಗೂ ನಿರಂತರ ವೃದ್ಧಿಸುತ್ತಿರುವ ಭಾರಿ ಅಂತರವು ‘ಮಾನವನ ಆತ್ಮಕ್ಕೆ ಭಯಭ್ರಾಂತಿ ಮತ್ತು ವ್ಯಸನ ತರುವಂತಹದಾಗಿದೆ’ ಎಂದರು.
ಡಿಎಂಕೆ ಬಿಕ್ಕಟ್ಟು ಉಲ್ಬಣ: ಎಂಜಿಆರ್ ಬೆಂಬಲಿಗರಿಂದ ಹೊಸ ಪಕ್ಷ ರಚನೆ
ಮದರಾಸು, ಅ. 17– ಡಿಎಂಕೆ ಪಕ್ಷ ದಿಂದ ಸಸ್ಪೆಂಡ್ ಮಾಡಲಾದ ಎಂ.ಜಿ. ರಾಮ ಚಂದ್ರನ್ ಅವರ ಬೆಂಬಲಿಗರು ನೂತನ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಇಂದಿನಿಂದ ಅಸ್ತಿತ್ವಕ್ಕೆ ಬಂದ ನೂತನ ಪಕ್ಷದ ಹೆಸರು ‘ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ’.
ಎಂಜಿಆರ್ ಅವರನ್ನು ಬೆಂಬಲಿಸುವ ಡಿಎಂಕೆ ಪಕ್ಷದ ಎಲ್ಲ ಶಾಖೆಗಳವರೂ ಅವು ಗಳನ್ನು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಶಾಖೆಗಳಾಗಿ ಪರಿವರ್ತಿಸಬೇಕೆಂದು ಡಿಎಂಕೆಯ ಎಂಜಿಆರ್ ಬೆಂಬಲಿಗರ ಸಮಿತಿ ಅಧ್ಯಕ್ಷ ಸಿ. ರಾಮಲಿಂಗಂ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.