ಕ್ಷಮಾದಾನ ನೀಡದಿದ್ದರೆ ಒತ್ತೆಯಾಳು ಕೊಲ್ಲುವೆ– ವೀರಪ್ಪನ್ ಬೆದರಿಕೆ
ಚೆನ್ನೈ, ಜುಲೈ 24 (ಯುಎನ್ಐ, ಪಿಟಿಐ)– ತನಗೆ ಹಾಗೂ ತನ್ನ ತಂಡದ ಇತರ ಸದಸ್ಯರಿಗೆ ಕ್ಷಮಾದಾನ ನೀಡದಿದ್ದಲ್ಲಿ ಅಪಹರಿಸಿರುವ ಕರ್ನಾಟಕದ ಒಂಬತ್ತು ಮಂದಿ ಅರಣ್ಯ ಸಿಬ್ಬಂದಿಯನ್ನು ಕೊಲ್ಲುವುದಾಗಿ ಕುಖ್ಯಾತ ನರಹಂತಕ ವೀರಪ್ಪನ್ ಪಟ್ಟು ಹಿಡಿದಿದ್ದಾನೆ.
ಹತ್ತು ದಿನದೊಳಗೆ ನಿರ್ಧಾರ ಕೈಗೊಳ್ಳದಿದ್ದಲ್ಲಿ ತಾನು ಅಪಹರಿಸಿರುವ ಒತ್ತೆಯಾಳುಗಳನ್ನು ಒಬ್ಬೊಬ್ಬರಾಗಿ ಕೊಲೆ ಮಾಡುವು ದಾಗಿ ವೀರಪ್ಪನ್ ಗಡುವು ನೀಡಿದ್ದಾನೆ.
ತಮಿಳುನಾಡು ಸರ್ಕಾರದ ಸಂಧಾನಕಾರರಾಗಿ ಅರಣ್ಯಕ್ಕೆ ತೆರಳಿದ್ದ ತಮಿಳು ಪತ್ರಕರ್ತ ಆರ್.ಆರ್. ಗೋಪಾಲ್ ಅವರಿಗೆ ವೀರಪ್ಪನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ.
ವೀರಪ್ಪನ್ ತಂಡ ಕಳೆದ 12ರಂದು ಅಪಹರಿಸಿದ ಕರ್ನಾಟಕದ ಒಂಬತ್ತು ಮಂದಿ ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿರುವುದನ್ನು ಚಿತ್ರಿಸಿರುವ ವಿಡಿಯೋ ಕ್ಯಾಸೆಟ್ ಅನ್ನು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಗೋಪಾಲ್ ಪತ್ರಕರ್ತರಿಗೆ ಪ್ರದರ್ಶಿಸಿದರು. ಸೋಮವಾರ ಬೆಳಿಗ್ಗೆ ತಾವು ಒತ್ತೆಯಾಳುಗಳನ್ನು ಭೇಟಿ ಮಾಡಿದ್ದಾಗಿ ಗೋಪಾಲ್ ವಿವರಿಸಿದರು.
ಮಹಾಶ್ವೇತಾ ದೇವಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ
ಮನಿಲಾ, ಜುಲೈ 24 (ಎಪಿ)– ಖ್ಯಾತ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಅವರಿಗೆ ಸಾಹಿತ್ಯಕ್ಕಾಗಿ ನೀಡುವ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆತಿದೆ.
ಮಹಾಶ್ವೇತಾ ಅವರು ಹೋರಾಟ ಮತ್ತು ತಮ್ಮ ಬರಹಗಳ ಮೂಲಕ ಆದಿವಾಸಿ ಜನರಿಗೆ ದೇಶದ ರಾಷ್ಟ್ರೀಯ ವಾಹಿನಿಯಲ್ಲಿ ಮಹತ್ವದ ಸ್ಥಾನ ದೊರಕಿಸಿಕೊಟ್ಟಿದ್ದಾರೆ ಎಂದು ಮ್ಯಾಗ್ಸೆಸ್ಸೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.