ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ 8.1.1997

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 19:30 IST
Last Updated 7 ಜನವರಿ 2022, 19:30 IST
   

ಹನಿ ನೀರಿಗೂ ಹೋರಾಟ: ತಮಿಳುನಾಡು ದೂರು

ನವದೆಹಲಿ, ಜ. 7– ಶತಮಾನಕ್ಕಿಂತಲೂ ಹಳೆಯದಾದ ಕಾವೇರಿ ವಿವಾದದ ಸಂಬಂಧ ಆದ ಒಪ್ಪಂದಗಳನ್ನು, ಕಾವೇರಿ ನ್ಯಾಯಮಂಡಳಿಯ ಆದೇಶಗಳನ್ನು ಉಲ್ಲಂಘಿಸಿಕೊಂಡು ಬರುತ್ತಿರುವ ಕರ್ನಾಟಕದ ಜತೆ ‘ಹನಿ ಹನಿ ನೀರಿಗೂ ಹೋರಾಟ ಮಾಡಬೇಕಾಗಿ ಬಂದಿದೆ’ ಎಂದು ತಮಿಳುನಾಡು ಇಂದು ಪ್ರತಿಪಾದಿಸಿತು; ಕಾವೇರಿ ನ್ಯಾಯಮಂಡಳಿಯ ಮುಂದೆ ಕರ್ನಾಟಕದ ನಿಲುವನ್ನು ಹೆಜ್ಜೆ ಹೆಜ್ಜೆಗೂ ತೀವ್ರವಾಗಿ ಆಕ್ಷೇಪಿಸಿತು.

ನ್ಯಾಯಮಂಡಳಿಯ ಹಿಂದಿನ ಅಧ್ಯಕ್ಷ ನ್ಯಾಯಮೂರ್ತಿ ಚಿತ್ತಘೋಷ್ ಮುಖರ್ಜಿ ಅವರು ಕಳೆದ ಜುಲೈನಲ್ಲಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಕಲಾಪ ಮತ್ತೆ ಅಧಿಕೃತವಾಗಿ ಆರಂಭವಾಯಿತು. ಕಳೆದ ತಿಂಗಳು ಹೊಸದಾಗಿ ನೇಮಕಗೊಂಡ ನ್ಯಾಯಮೂರ್ತಿ ಎನ್‌.ಪಿ.ಸಿಂಗ್ ಅವರು ಕಾವೇರಿ ವಿವಾದ ಕುರಿತ ಪ್ರಕರಣದ ಕಲಾಪವನ್ನು ಪುನರಾ
ರಂಭಿಸಿದರು.

ADVERTISEMENT

ಪನೋರಮಾ ವಿರುದ್ಧ ಪರ್ಯಾಯ ಚಿತ್ರ ಪ್ರದರ್ಶನಕ್ಕೆ ಸಿದ್ಧತೆ

ತಿರುವನಂತಪುರ, ಜ. 7– ಭಾರತೀಯ ಪನೋರಮಾ ವಿಭಾಗದಲ್ಲಿ ತಮ್ಮ ಚಿತ್ರಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕೆಲವು ಖ್ಯಾತ ನಿರ್ದೇಶಕರು ಇಲ್ಲಿ ನಡೆದಿರುವ 28ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ತಮ್ಮ ಚಿತ್ರಗಳ ಪ್ರದರ್ಶನಕ್ಕೆ ಪರ್ಯಾಯ ಪ್ರಯತ್ನ ನಡೆಸಿರುವುದಾಗಿ ವರದಿಯಾಗಿದೆ.

ಪರ್ಯಾಯ ಚಿತ್ರ ಪ್ರದರ್ಶನಕ್ಕೆ ಅಣಿಯಾದವರಲ್ಲಿ ಬಸು ಭಟ್ಟಾಚಾರ್ಯ, ಗುಲ್ಜಾರ್, ಗೋವಿಂದ ನಿಹಲಾನಿ, ಅರುಣಾ ರಾಜೇ, ಮೀರಾ ನಾಯರ್, ಅಮೋಲ್ ಪಾಲೇಕರ್ ಮತ್ತು ಸುಧೀರ್ ಮಿಶ್ರ ಸೇರಿದ್ದಾರೆ ಎನ್ನಲಾಗಿದೆ. ಜನವರಿ 10ರ ನಂತರ ಹೆಚ್ಚಿನ ವಿದೇಶಿ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಂದು ಈ ಪ್ರದರ್ಶನ ನಡೆಯುವುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.