ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ 15.1.1997

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 19:30 IST
Last Updated 14 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಲೇಜಿನಲ್ಲಿ ಸಿನಿಮಾ ರಸಗ್ರಹಣಕ್ಕೆ ಆಗ್ರಹ

ತಿರುವನಂತಪುರ, ಜ.14– ರಾಷ್ಟ್ರೀಯ ಚಲನಚಿತ್ರ ರೂಪಿಸಲು ನೇಮಕಗೊಂಡಿದ್ದ ಡಾ. ಶಿವರಾಮ ಕಾರಂತ ನೇತೃತ್ವದ ಸಮಿತಿ ಸಲಹೆ ಮಾಡಿದಂತೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚಲನಚಿತ್ರ ರಸಗ್ರಹಣ ತರಬೇತಿಯನ್ನು ಅಳವಡಿಸಬೇಕು ಎಂದು ಇಲ್ಲಿ ಸಮಾವೇಶಗೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆಗ್ರಹಪಡಿಸಲಾಯಿತು.

28ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮವು ವ್ಯವಸ್ಥೆಗೊಳಿಸಿದ ವಿಚಾರ ಸಂಕಿರಣದಲ್ಲಿ ಚಿತ್ರರಂಗ ಒಟ್ಟಾರೆಯಾಗಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಚರ್ಚಿಸಲಾಯಿತು.

ADVERTISEMENT

‘ಈ ಸಮಸ್ಯೆಗಳ ಕುರಿತಾಗಿ ಕಳೆದ 16 ವರ್ಷಗಳಿಂದ ಚರ್ಚಿಸುತ್ತಿದ್ದೇನೆ. ಹಲವು ಸಮಿತಿಗಳು ಅನೇಕ ಸಲಹೆಗಳನ್ನು ನೀಡಿವೆ. ದುರದೃಷ್ಟದಿಂದ ಈ ಸಲಹೆಯನ್ನು ಜಾರಿಗೊಳಿಸಲು ಸರ್ಕಾರ ಮನಸ್ಸು ಮಾಡಿಲ್ಲ’ ಎಂದು ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್‌ ಹೇಳಿದರು.

‘ಪರ್ಯಾಯ ಚಿತ್ರಗಳ ಮಾತಿರಲಿ, ಮುಖ್ಯವಾಹಿನಿಯ ವಾಣಿಜ್ಯ ಚಿತ್ರಗಳೇ ಈಗ ಮೊದಲಿನಂತೆ ಪ್ರೇಕ್ಷಕರ ಬೆಂಬಲ ಗಳಿಸಲು ವಿಫಲವಾಗುತ್ತಿವೆ. ಇಡೀ ಚಿತ್ರರಂಗ ಕುಸಿತದ ಹಾದಿಯಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರ ಕೆಲವು ಕ್ರಮಗಳನ್ನಾದರೂ ಕೈಗೊಳ್ಳಲೇ ಬೇಕು’ ಎಂದು ಅವರು ಹೇಳಿದರು.

‘ನಗರ ಪ್ರದೇಶಗಳಲ್ಲಿ ಚಿತ್ರಮಂದಿರಗಳು ವಾಣಿಜ್ಯ ಸಮುಚ್ಚಯಗಳಾಗಿ ಪರಿವರ್ತನೆ ಆಗುವುದನ್ನು ಸರ್ಕಾರ ತಡೆಯಬೇಕು. ಸಣ್ಣ ಪ್ರಮಾಣದ ಚಿತ್ರಮಂದಿರಗಳ ನಿರ್ಮಾಣಕ್ಕೆ ಉತ್ತೇಜನ ನೀಡಬೇಕು. ರಾಜ್ಯ ಸರ್ಕಾರಗಳು ನೀಡುತ್ತಿರುವ ಮನರಂಜನಾ ತೆರಿಗೆ ವಿನಾಯಿತಿಯ ಲಾಭ ನಿರ್ಮಾಪಕನಿಗೆ ಸಿಗುವಂತೆ ನಿಯಮಗಳಲ್ಲಿ ಬದಲಾವಣೆ ತರಬೇಕು’ ಎಂದೂ ಅಡೂರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.