ಹಾಲಿನಲ್ಲಿ ಹುಳು; ಕಾರ್ಮಿಕರ ಕೈವಾಡ
ಬೆಂಗಳೂರು, ಜುಲೈ 3 – ಬೆಂಗಳೂರು ಡೈರಿಯ ‘ಹಾಲಿನಲ್ಲಿ ಹುಳು’ ಪ್ರಸಂಗ ವ್ಯಾನಿನಲ್ಲಿ ಬರುತ್ತಿದ್ದ ಮೂವರು ಕೆಲಸಗಾರರು ನೀರು ಮತ್ತು ಡಬಲ್ ಟೋನ್ಡ್ ಮಿಲ್ಕ್ ಬೆರೆಸಿ ಅಕ್ರಮ ಮಾಡುತ್ತಿದ್ದ ಪ್ರಕರಣದಿಂದಾಗಿದೆಯೆಂದು ಪತ್ತೆಹಚ್ಚಲಾಗಿದೆಯೆಂದೂ ಆ ಮೂವರು ಕಾರ್ಮಿಕರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೆಂದೂ ಪಶುಸಂಗೋಪನ ಸಚಿವ ಶ್ರೀ ಎನ್. ಚಿಕ್ಕೇಗೌಡ ಅವರು ಇಂದು ವಿಧಾನಸಭೆಗೆ ವಿವರಣೆ ನೀಡಿದರು.
ಮೊನ್ನೆ ಶ್ರೀ ವಾಟಾಳ್ ನಾಗರಾಜ್ ಅವರು ಎತ್ತಿದ್ದ ವಿಚಾರದ ಬಗ್ಗೆ ಹೇಳಿಕೆ ನೀಡಿದ ಸಚಿವರು ಶೇಷಾದ್ರಿಪುರಕ್ಕೆ ಬೆಳಿಗ್ಗೆ 5 ಗಂಟೆಗೆ ಹಾಲು ಬರುತ್ತಿದ್ದು ಶ್ರೀಮತಿ ಬಿ.ವಿ. ಲಲಿತ ಎಂಬ ಸಬ್ ಏಜೆಂಟರಿಂದ ಹಾಲುಕೊಂಡ ಶ್ರೀ ಎ.ವಿ. ತಲಾಂಗ್ ಎಂಬುವವರು ಹುಳು ಇದ್ದದ್ದನ್ನು ತಂದು ಪೊಲೀಸು ಠಾಣೆಗೆ ದೂರು ಕೊಟ್ಟರೆಂದೂ ಹೇಳಿದರು.
ಸದನ ಸಮೀಕ್ಷೆ
ಬೆಂಗಳೂರು, ಜುಲೈ 3 – ಆಡಳಿತ ಯಂತ್ರದ ಮನೋಭಾವ ಬದಲಾಣೆಯಾಗದೆ ‘ಹತ್ತಲ್ಲ ನೂರು ಇಂದಿರಾ ಗಾಂಧಿ ಬಂದರೂ ಸಮಾಜವಾದ ಸಾಧ್ಯವಿಲ್ಲ’
– ಕಾಂಗ್ರೆಸ್ ಸದಸ್ಯ ಶ್ರೀ ಶೀರ್ನಾಳಿ ಚಂದ್ರಶೇಖರ್ ಕೂಗಿ ಹೇಳಿದರು.
ಸೋಮವಾರ ವಿಧಾನ ಸಭೆಯಲ್ಲಿ ಸಾರ್ವತ್ರಿಕ ಆಡಳಿತ ಇಲಾಖೆ ಬೇಡಿಕೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಎಲ್ಲ ಬಯಸಿದ್ದೂ ಈ ಯಂತ್ರದ ಸುಧಾರಣೆಯನ್ನ. ಎಲ್ಲಾ ಕೊಟ್ಟಿದ್ದೂ ಈ ಎಚ್ಚರಿಕೆಯನ್ನ. ಸದ್ಯದ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಹಿಂದಿನ ದಾಟಿಯನ್ನೇ ಹಿಡಿದಿದ್ದೀರಿ? – ಇದು ವಿರೋಧಿ ಸದಸ್ಯರ ಟೀಕೆ, ಆಕ್ರೋಶ.
ಜೊತೆಗೆ ನೀರಾವರಿ, ಪೊಲೀಸು ಹಾಗೂ ಜೈಲುಗಳ ಬೇಡಿಕೆಗಳೂ ಇದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.