ನಾಯ್ಡು ಬಣಕ್ಕೆ ರಜನಿ ಬೆಂಬಲ
ಹೈದರಾಬಾದ್, ಆ. 27 (ಪಿಟಿಐ)– ಆಂಧ್ರಪ್ರದೇಶದ ನಾಟಕೀಯ ರಾಜಕೀಯ ವಿದ್ಯಮಾನಗಳ ಒಂದು ಗಮನಾರ್ಹ ಬೆಳವಣಿಗೆಯಾಗಿ ಇಂದು ಖ್ಯಾತ ತಮಿಳು ಚಿತ್ರನಟ ರಜನೀಕಾಂತ್ ಅವರು ತೆಲುಗುದೇಶಂನ ಭಿನ್ನಮತೀಯರ ಬಣಕ್ಕೆ ತಮ್ಮ ಬೆಂಬಲ ಸೂಚಿಸಿದರು. ಇದೇ ವೇಳೆ ಎನ್.ಟಿ.ರಾಮರಾವ್ ಅವರ ಬಗ್ಗೆ ಗೌರವವನ್ನೂ ವ್ಯಕ್ತಪಡಿಸಿದರು.
ಆಡಳಿತ ತೆಲುಗುದೇಶಂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಎನ್ಟಿಆರ್ ಜತೆ ಮಾತುಕತೆ ವೇಳೆ ಆತಂಕ ವ್ಯಕ್ತಪಡಿಸಿದರು. ರಜನೀಕಾಂತ್ ಅವರ ಮುಂದೆ ಎನ್ಟಿಆರ್ ಗದ್ಗದಿತರಾದರು.
ಇಲ್ಲಿಗೆ ಧಾವಿಸಿ ಬಂದ ರಜನೀಕಾಂತ್, ಎನ್ಟಿಆರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ನಾಯ್ಡು ಬೆಂಬಲಿಗರ ಬಣವನ್ನು ಉದ್ದೇಶಿಸಿ ಮಾತನಾಡಿದರು. ಎನ್ಟಿಆರ್ ದೊಡ್ಡವರು (ಪೆರಿಯಾರ್) ಎಂದು ಅವರು ಶ್ಲಾಘಿಸಿದರೂ ಅವರ ಪತ್ನಿ ಲಕ್ಷ್ಮಿ ಶಿವಪಾರ್ವತಿ ಅನಗತ್ಯವಾಗಿ ಪಕ್ಷ ಮತ್ತು ಆಡಳಿತದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಖಂಡಿಸಿದರು.
‘ರಾಜ್ಯ ಲಾಟರಿ ನಿಷೇಧದಿಂದ ದುಷ್ಪರಿಣಾಮ ಹೆಚ್ಚು’
ಮುಂಬೈ, ಆ. 27 (ಯುಎನ್ಐ)– ರಾಜ್ಯ ಸರ್ಕಾರಗಳು ಲಾಟರಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಅಕ್ರಮ ಜೂಜುಗಾರಿಕೆಗೆ ಪ್ರೋತ್ಸಾಹ ಲಭಿಸಲಿದೆ ಎಂದು ರಿಸರ್ವ್ ಬ್ಯಾಂಕ್ ಅಧ್ಯಯನವೊಂದು ತಿಳಿಸಿದೆ.
ರಿಸರ್ವ್ ಬ್ಯಾಂಕಿನ ಆರ್ಥಿಕ ವಿಶ್ಲೇಷಣೆ ಮತ್ತು ನೀತಿ–ನಿಯಮ ಇಲಾಖೆಯ ಸಲಹೆಗಾರ ಎಸ್. ಚಟರ್ಜಿ ಅವರು ನಡೆಸಿರುವ ಅಧ್ಯಯನದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ‘ಜನರ ಜೂಜಾಟದ ಪ್ರವೃತ್ತಿಯನ್ನು ಇಂಥ ಕ್ರಮಗಳಿಂದ ಸಮರ್ಥವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಸಾಮಾಜಿಕ ಪಿಡುಗಾಗಿದ್ದರೂ ಸರ್ಕಾರ ಒಮ್ಮೆ ಒಪ್ಪಿಕೊಂಡಿದ್ದ ಕಾರಣ ಈಗ ಅದನ್ನು ನಿಷೇಧಿಸಿದರೂ ಹೆಚ್ಚಿನ ಪ್ರಯೋಜನವಾಗದು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.