
ತುಮಕೂರು, ಜ. 23– ನೆಲಮಂಗಲ ತಾಲ್ಲೂಕಿನ ಬಿಲ್ಲನಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಗರದ ಐದು ಮಂದಿ ಯುವ ವಕೀಲರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ತುಮಕೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟಾಟಾ ಸುಮೊ ವಾಹನ ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ತುಮಕೂರಿನ ಯುವ ವಕೀಲರಾದ ಡಿ.ಎಸ್. ಪ್ರವೀಣ್ ಕುಮಾರ್ (30), ಲೋಕೇಶ್ ಗಾಂಧಿ (31), ಸಿ.ಬಿ. ಜೇಮ್ಸ್ (32), ಕೃಷ್ಣಮೂರ್ತಿ (29), ಮಾರುತಿ ಪ್ರಸಾದ್ (31), ಸಾಫ್ಟ್ವೇರ್ ಎಂಜಿನಿಯರ್ ಅರುಣ್ಕುಮಾರ್ (29) ಹಾಗೂ ಚಾಲಕ ಸಾದಿಕ್ (30) ಮೃತಪಟ್ಟವರು.
ಅರೆಕಾಲಿಕ ನೌಕರರ ಸೇವೆ ಕಾಯಂ: ತೀರ್ಪು ಊರ್ಜಿತ
ಬೆಂಗಳೂರು, ಜ. 23– ಜಿಲ್ಲಾ ಪಂಚಾಯಿತಿಗಳಲ್ಲಿ ಹತ್ತು ವರ್ಷಗಳ ಕಾಲ ಅರೆಕಾಲಿಕ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಕಾಯಂ ಮಾಡುವಂತೆ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಇಂದು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಿಲ್ಲಾ ಪಂಚಾಯಿತಿಯ ಅರೆಕಾಲಿಕ ನೌಕರರ ಸೇವೆಯನ್ನು ಕಾಯಂ ಮಾಡುವಂತೆ ಏಕ ಸದಸ್ಯಪೀಠ ನೀಡಿದ್ದ ತೀರ್ಪಿನ ವಿರುದ್ಧ ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರದ ಮನವಿಯನ್ನು ನ್ಯಾಯಪೀಠವು ತಳ್ಳಿಹಾಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.