ಬಿಜೆಪಿಯಿಂದ ಧರ್ಮದ ದುರ್ಬಳಕೆ: ಪ್ರಧಾನಿ ಟೀಕೆ
ಪಾಲನ್ಪುರ, ಫೆ. 11 (ಪಿಟಿಐ): ಬಿಜೆಪಿಯು ಧರ್ಮದ ಹೆಸರಿನಲ್ಲಿ ದೇಶದ ಮನಸ್ಸಿಗೆ ವಿಷವೊಡ್ಡುತ್ತಿದೆ. ಹಿಂಸೆಯಲ್ಲಿ ನಂಬಿಕೆ ಇರುವ ಆ ಪಕ್ಷವನ್ನು ಮೂಲೆಗುಂಪು ಮಾಡಬೇಕು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕರೆ ನೀಡಿದರು.
ಇಂದು ಇಲ್ಲಿ ಚುನಾವಣಾ ಪ್ರಚಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ‘ಆರ್ಥಿಕ ದೈತ್ಯ’ನಾಗಿ ಬೆಳೆಯಬೇಕಾದರೆ ಶಾಂತಿ ಮತ್ತು ಸ್ಥಿರತೆ ಅಗತ್ಯವೆಂದು ಹೇಳಿದರು. ಮಂಡಲ್ ವರದಿಯ ವಿಷಯಕ್ಕೆ ವಿ.ಪಿ. ಸಿಂಗ್ ಅವರು ದೇಶದಾದ್ಯಂತ ಬೆಂಕಿ ಹೊತ್ತಿಸಿದರೆ, ಬಿಜೆಪಿಯು ಮಸೀದಿ–ಮಂದಿರದ ವಿಷಯಕ್ಕೆ ದೇಶವನ್ನು ಛಿದ್ರಗೊಳಿಸಿತು ಎಂದು ಟೀಕಿಸಿದರು.
ಪರಮಾಣು ಕಾರ್ಯಕ್ರಮನಿಲುಗಡೆ ಇಲ್ಲ– ಭಾರತ
ನವದೆಹಲಿ, ಫೆ. 11 (ಪಿಟಿಐ, ಯುಎನ್ಐ): ವಿಶ್ವ ಮಟ್ಟದಲ್ಲಿ ಅಣ್ವಸ್ತ್ರ ಸಾಮಗ್ರಿ ಉತ್ಪಾದನೆಯನ್ನು ನಿಷೇಧಿಸುವ ತೃಪ್ತಿಕರ ಶಾಸನ ಜಾರಿಗೆ ಬರುವವರೆಗೆ ದೇಶದ ಶಾಂತಿಯುತ ಪರಮಾಣು ಕಾರ್ಯಕ್ರಮದ ಮೇಲೆ ಯಾವುದೇ ನಿರ್ಬಂಧವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾರತ ಇಂದು ಸ್ಪಷ್ಟಪಡಿಸಿತು.
ಹಿಂಬಾಗಿಲ ಮೂಲಕ ಅಣ್ವಸ್ತ್ರ ಪ್ರಸರಣ ನಿಷೇಧವನ್ನು ಅಮೆರಿಕವು ಭಾರತದ ಮೇಲೆ ಹೇರುತ್ತಿದೆ ಎಂಬ ವರದಿಗಳ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ವಿದೇಶಾಂಗ ಖಾತೆಯ ವಕ್ತಾರ ಈ ಸ್ಪಷ್ಟನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.