ಹಲವು ಹಗರಣಗಳ ಭಾರ ಮೈಮೇಲೆ ಬಿದ್ದು ಬಸವಳಿಯುವ ರಾಜಕಾರಣಿಗಳು ತಮ್ಮ ಬಂಧನದ ಸುಳಿವು ಸಿಕ್ಕಿದೊಡನೆಯೇ, ಪೊಲೀಸರ ಕೈಗಳಿಂದ ಪಾರಾಗಲು ಕೆಲಕಾಲ ತಲೆಮರೆಸಿಕೊಳ್ಳುವುದು, ಕಡೆಗೆ ತಾವೇ ನ್ಯಾಯಾಲಯಕ್ಕೆ ಬಂದು ನಾಟಕೀಯವಾಗಿ ಶರಣಾಗುವುದು ಇವೆಲ್ಲಾ ಈಗ ವಿಶೇಷ ಅನ್ನಿಸುವುದೇ ಇಲ್ಲ.
ಹಾಗೆಯೇ, ನಾವೀಗ, ದುರ್ಬೀನು ಮತ್ತು ಹಗಲು ದೀವಟಿಗೆಗಳ ನೆರವನ್ನು ಪಡೆದರೂ ರಾಜಕಾರಣಿಗಳ ಪೈಕಿ ಬಹುಪಾಲು ಜನರಲ್ಲಿ ಪ್ರಾಮಾಣಿಕತೆಯನ್ನು ಕಾಣುವುದು ಕಷ್ಟಸಾಧ್ಯವೇ.
ಹಾಗಿರುವಾಗ, ಬಂಧನಕ್ಕೊಳಗಾಗುವ ಅಂಥಾ ರಾಜಕಾರಣಿಗಳ ಆರೋಗ್ಯ ಸ್ಥಿತಿ, ಅವರು ಕಾರಾಗೃಹವನ್ನು ಸೇರುತ್ತಿದ್ದಂತೆಯೇ ಹದಗೆಡುವುದಿದೆಯಲ್ಲಾ, ಅದು ಕೂಡಾ ಪ್ರಾಮಾಣಿಕ ಅನಾರೋಗ್ಯ ಹೌದು ಎಂದು ನಂಬಲು ಪರದಾಡುವ ಗತಿ ಈಗ ನಮ್ಮದಾಗಿದೆ ಎಂದರೆ ತಪ್ಪಾಗದು.
ಅದರಲ್ಲೂ ಬಂಧನದ ತೊಂದರೆಗಳಿಂದ ದೂರವುಳಿದು, ಸರ್ಕಾರಿ ಖರ್ಚಿನಲ್ಲಿ ಐಷಾರಾಮಿ ಆಸ್ಪತ್ರೆಗಳಲ್ಲಿ, ಚಿಕಿತ್ಸೆ ಉಪಚಾರಗಳ ಸೌಲಭ್ಯ ಅನುಭವಿಸುತ್ತಾ ಕಾಲಾಯಾಪನೆ ಮಾಡಬಯಸುವ ಬುದ್ಧಿವಂತ ರಾಜಕಾರಣಿಗಳ ಸಂಖ್ಯೆ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಅನನ್ಯ ಕೊಡುಗೆಯಾ ಎಂದು ಅನುಮಾನ ಪಡುವ ಪರಿಸ್ಥಿತಿ ಇರುವಾಗ, ಯಾವುದನ್ನು ನಂಬಬೇಕೋ ಯಾವುದನ್ನು ನಂಬಬಾರದೋ ಗೊತ್ತೇ ಆಗುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.