ADVERTISEMENT

ನೀವು ಮಾಡಿರುವ ಆಸ್ತಿ ಬಗ್ಗೆ ತನಿಖೆ: ಇದು... ಸಿನಿಮಾ ಡೈಲಾಗ್‌ ಅಲ್ಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:26 IST
Last Updated 21 ಮಾರ್ಚ್ 2019, 20:26 IST

‘ನಮ್ಮ ಪಕ್ಷ ಅಧಿಕಾರದಲ್ಲಿದೆ. ನಿಮ್ಮ ಅಕ್ರಮಗಳ ಜಾತಕ ಹೊರತರಬೇಕಾಗುತ್ತದೆ. ನೀವು ಮಾಡಿರುವ ಆಸ್ತಿ ಬಗ್ಗೆ ತನಿಖೆ ಮಾಡಿಸಿದರೆ ಬೀದಿಗೆ ಬೀಳುತ್ತೀರಿ. ನಮ್ಮ ಟಿಕೆಟ್ ಹಣ ತಿಂದು ನೀವು ಬದುಕುತ್ತಿದ್ದೀರಿ’– ಇದು ಯಾವುದೋ ಸಿನಿಮಾ ಡೈಲಾಗ್ ಅಲ್ಲ. ಜೆಡಿಎಸ್‌ ಶಾಸಕ ನಾರಾಯಣಗೌಡ ಅವರು ಸಿನಿಮಾ ನಟರ ಕುರಿತು ಹೇಳಿರುವ ಆಣಿಮುತ್ತುಗಳು (ಪ್ರ.ವಾ., ಮಾರ್ಚ್‌ 20). ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಪ್ರಜೆಗಳ ಹಕ್ಕು. ಸ್ಪರ್ಧಾಳುಗಳ ಪರವಾಗಿ ಸಂಘ ಸಂಸ್ಥೆಗಳು, ನಟ ನಟಿಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದು ಸರ್ವೇ ಸಾಮಾನ್ಯ. ಆದರೆ, ಶಾಸಕರ ಹೇಳಿಕೆಗಳನ್ನು ಗಮನಿಸಿದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಭಿನ್ನವಾಗಿದೆಯೇನೋ ಎಂದು ಭಾಸವಾಗುತ್ತಿದೆ.

ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಇಡೀ ಸರ್ಕಾರದ ವ್ಯವಸ್ಥೆಯನ್ನೇ ತಮ್ಮ ಪರವಾಗಿ ಮಾಡಿಕೊಂಡಿರುವ ಶಾಸಕರಿಗೆ, ಸಿನಿಮಾ ನಟರ ಪ್ರಾಮಾಣಿಕತೆ ಬಗ್ಗೆ ಪ್ರಶ್ನಿಸುವ ನೈತಿಕತೆ ಎಲ್ಲಿದೆ? ಅವರ ಹೇಳಿಕೆಗಳನ್ನು ಗಮನಿಸಿದರೆ ದಬ್ಬಾಳಿಕೆ, ಅಧಿಕಾರದ ಅಮಲು, ದರ್ಪ ಎಲ್ಲವೂ ಕಾಣಿಸುತ್ತವೆ. ಶಾಸಕರ ಈ ಹೇಳಿಕೆಯ ಹಿಂದೆ, ಅವರಿಗೆ ಸಿನಿಮಾ ನಟರ ಪ್ರಭಾವದಿಂದ ಎಲ್ಲಿ ಸೋಲಾಗುವುದೆಂಬ ಹತಾಶೆಯಿದೆಯೋ ಅಥವಾ ಇಂಥ ಹೇಳಿಕೆಗಳಿಂದ ಮತದಾರರು ಮತ್ತು ಸಿನಿಮಾ ನಟರನ್ನು ಪ್ರಚೋದಿಸಿ ಬೇರೆಯವರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶವಿದೆಯೋ ಎಂಬ ಸಂದೇಹ ಮೂಡುತ್ತದೆ.

-ತಿಮ್ಮೇಶ ಮುಸ್ಟೂರು,ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.