ADVERTISEMENT

ಭಜರಂಗಿ ಮತ್ತು ಕಲ್ಲರಳಿ...

ಬಿ.ಎಲ್.ವೇಣು
Published 11 ಅಕ್ಟೋಬರ್ 2015, 19:22 IST
Last Updated 11 ಅಕ್ಟೋಬರ್ 2015, 19:22 IST

ಹಿಂದಿಯ ‘ಭಜರಂಗಿ ಭಾಯಿಜಾನ್’ ವರ್ಸಸ್‌ ಕನ್ನಡದ ‘ಕಲ್ಲರಳಿ ಹೂವಾಗಿ’.  ಈ ಹೋಲಿಕೆ ಗಮನಿಸಿ.
‘ಭಜರಂಗಿ...’ಯಲ್ಲಿ ಹೀರೊ, ಪಾಕಿಸ್ತಾನದಿಂದ ತಪ್ಪಿಸಿಕೊಂಡ ಮುಸ್ಲಿಂ ಮೂಗ ಬಾಲಕಿಯನ್ನು  ತನ್ನ ಮನೆಗೆ ಕರೆತರುತ್ತಾನೆ.

‘ಕಲ್ಲರಳಿ...’ಯಲ್ಲಿ ಗಡಿಯುದ್ಧದಲ್ಲಿ ದೊರೆತ ಮುಸ್ಲಿಂ ಯುವತಿಯನ್ನು ಹೀರೊ ಮನೆಗೆ ಕರೆತರುತ್ತಾನೆ. ಆಕೆ ಮೂಗಿಯೆಂದು ತಿಳಿಯುತ್ತದೆ. 
‘ಭಜರಂಗಿ...’ಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೀರೊ ಮನೆಯಲ್ಲಿ, ಮುಸ್ಲಿಂ ಬಾಲಕಿಯನ್ನು ಕರೆತಂದಿದ್ದಕ್ಕೆ ನಾಯಕಿಯ ತಂದೆ  ವಿರೋಧಿಸುತ್ತಾನೆ.

‘ಕಲ್ಲರಳಿಯಲ್ಲಿ...’   ಲಿಂಗಾಯತ  ಕುಟುಂಬದ ಹೀರೊ ಮನೆಯಲ್ಲಿ ತಾಯಿ ವಿರೋಧಿಸುತ್ತಾಳೆ. 
‘ಭಜರಂಗಿ...’ಯಲ್ಲಿ ಬಾಲಕಿಗೆ ಬಿರಿಯಾನಿ ಇಷ್ಟ.  ಇದನ್ನು ತಿಳಿದು ಹೀರೊ ಹೋಟೆಲ್‌ನಲ್ಲಿ ಕೊಡಿಸುತ್ತಾನೆ.

‘ಕಲ್ಲರಳಿಯಲ್ಲಿ...’  ಯುವತಿಗೆ ಬಿರಿಯಾನಿ ಇಷ್ಟ. ಹೀರೊ ಗೆಳೆಯನ ಮನೆಯಿಂದ ತಂದು ಕೊಡುತ್ತಾನೆ.
‘ಭಜರಂಗಿ...’ಯಲ್ಲಿ ಹೀರೊ, ಬಾಲಕಿಯನ್ನು ಪಾಕಿಸ್ತಾನಕ್ಕೆ ಸೇರಿಸುವ ಪ್ರಯತ್ನದಲ್ಲಿ ಸಫಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಹೀರೊ ಹೊರಟಾಗ ಬಾಲಕಿಗೆ ಮಾತು ಬರುತ್ತದೆ.

‘ಕಲ್ಲರಳಿಯಲ್ಲಿ...’  ಹೀರೊ, ಹುಡುಗಿಯನ್ನು ಮೈಸೂರಿಗೆ (ಹೈದರ್ ಆಡಳಿತ) ಸೇರಿಸುವಲ್ಲಿ ವಿಫಲ- ಯುದ್ಧ. ಹೀರೊ ಮರಣದಂಡನೆಗೆ ತುತ್ತಾದ ಸಂದಿಗ್ಧತೆಯಲ್ಲಿ  ಯುವತಿಗೆ ಮಾತು ಬರುತ್ತದೆ.

ಎರಡೂ ಚಿತ್ರಗಳ ಹಿನ್ನೆಲೆಯಲ್ಲಿ ಭಾವೈಕ್ಯ ಸಂದೇಶ ಸೂಚ್ಯವಾಗಿದೆ. ಮೊನ್ನೆ ‘ಭಜರಂಗಿ...’ ಸಿನಿಮಾ ನೋಡಿದಾಗ  ನನಗೆ ನನ್ನ ಕೃತಿ ಆಧಾರಿತ ಟಿ.ಎಸ್. ನಾಗಾಭರಣ ನಿರ್ದೇಶನದ ‘ಕಲ್ಲರಳಿ ಹೂವಾಗಿ’ ನೆನಪಾಯಿತು. ಈ ಎರಡೂ ಚಿತ್ರಗಳಲ್ಲಿರುವ ಸಾಮ್ಯತೆ ಕಂಡು ಬೆರಗಾದೆ.

ಹಿಂದಿ ಚಿತ್ರದ ವಿಮರ್ಶೆ ಬರೆದ ಕನ್ನಡ ವಿಮರ್ಶಕರು ಎಲ್ಲೂ ಈ ವಿಷಯ ಪ್ರಸ್ತಾಪಿಸಿಲ್ಲ!  ಪ್ರೇಕ್ಷಕರೂ ಸ್ಪಂದಿಸಿದಂತಿಲ್ಲ!  ಇದು ಕನ್ನಡಿಗರ ಜಾಯಮಾನ, ನಷ್ಟವೇನಿಲ್ಲ ಬಿಡಿ.  ಹಿಂದಿ ಚಿತ್ರವೊಂದು ನನ್ನ ಕಥೆಯ ಎಳೆಯನ್ನು ಬಳಸಿಕೊಂಡಿದೆ. ಅದೇ ನನಗೆ  ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.