ಕರ್ನಾಟಕ ರಾಜ್ಯದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿಸುವ ಕುರಿತಂತೆ, ವೈದ್ಯಕೀಯ ಶಿಕ್ಷಣ ಸಚಿವರಾದ ರಾಮದಾಸ್ರವರ ಹೇಳಿಕೆಯ ಬಗ್ಗೆ ಸಾಕಷ್ಟು ವಿರೋಧವೇ ವ್ಯಕ್ತವಾಗಿದೆ.
ಕೆಲವರಂತೂ ಸಚಿವರನ್ನು ತೀರಾ ಲಘುವಾಗಿ ಟೀಕಿಸಿದ್ದಾರೆ. ಆದರೆ, ಈ ರೀತಿಯ ಟೀಕೆಗಳಿಗಿಂತ, ಸಂಸ್ಕೃತ ಭಾಷೆಯನ್ನು ಕುರಿತಂತೆ ಶೈಕ್ಷಣಿಕ ಹಿನ್ನೆಲೆಯಲ್ಲಿ, ವೈಜ್ಞಾನಿಕ ಚಿಂತನೆ ಹೆಚ್ಚು ಪರಿಣಾಮಕಾರಿಯಲ್ಲವೆ?
ಏಕೆಂದರೆ, ದಂತವೈದ್ಯ ವಿಜ್ಞಾನವನ್ನು ಕುರಿತಂತೆ ಪ್ರಪಂಚದಾದ್ಯಂತವೂ ಪ್ರಪಂಚದಷ್ಟೇ ವಿಸ್ತಾರವೂ ಅಗಾಧವೂ ಆದ ಸಂಶೋಧನೆ ನಡೆದಿರುವುದು, ಇಂಗ್ಲಿಷ್ನಲ್ಲಿ. ಅಂತಹ ಎಷ್ಟೋ ಸಂಪುಟಗಳು ಕನ್ನಡದಲ್ಲೂ ಪ್ರಕಟವಾಗಿವೆ.
ಅಂದ ಮೇಲೆ ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಡ್ಡಾಯಗೊಳಿಸುವುದರಿಂದ, ವಿದ್ಯಾರ್ಥಿಗಳಿಗೆ ಅದೊಂದು ಅವೈಜ್ಞಾನಿಕವೂ ಅಶೈಕ್ಷಣಿಕವೂ ಆದ ಹೊರೆಯಾಗುವುದಿಲ್ಲವೆ? ಹಾಗೆ ನೋಡಿದರೆ, ಆದಿ ಕಾಲದಿಂದ
ಹಿಡಿದು, ಆಧುನಿಕ ಕಾಲದವರೆಗೂ, ಸಂಸ್ಕೃತ ಒಂದು ಜಾತಿಯವರ ಭಾಷೆಯೇ ಹೊರತು, ಅದೊಂದು ಜನ ಭಾಷೆ ಅಲ್ಲವೇ ಅಲ್ಲ. ಸಾಮಾಜಿಕ ಭಾಷಾ ವಿಜ್ಞಾನದ ದೃಷ್ಟಿಯಲ್ಲಿ ನೋಡಿದರೂ ಸಹ, ಸಂಸ್ಕೃತ ಮೂಲತಃ ಶಾಸ್ತ್ರಮುಖಿ ಭಾಷೆಯೇ ಹೊರತು, ಕನ್ನಡದಂತೆ ಅದೊಂದು ಜನಮುಖಿ ಭಾಷೆ ಅಲ್ಲ.
ಹಾಗಾಗಿಯೇ, ನಾಡಿನಾದ್ಯಂತ ಸಾವಿರಾರು ಶಾಲಾ ಕಾಲೇಜುಗಳಲ್ಲೂ, ವಿಶ್ವವಿದ್ಯಾನಿಲಯಗಳ ಸಂಸ್ಕೃತ ವಿಭಾಗಗಳಲ್ಲೂ ವಿದ್ಯಾರ್ಥಿಗಳ ಕೊರತೆಯೇ ತುಂಬಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.