ADVERTISEMENT

ಒಕ್ಕೂಟ ತತ್ವಕ್ಕೆ ಅಪಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST

ರಾಜ್ಯಗಳು ಮತ್ತು ಒಕ್ಕೂಟ ಸರ್ಕಾರದ ನಡುವಣ ಅತ್ಯಂತ ಸೂಕ್ಷ್ಮವಾದ ಹಣಕಾಸು ಸಂಬಂಧದಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ಮತ್ತು ಭಾರತ ಸರ್ಕಾರವು ಸಂವಿಧಾನದತ್ತ ಒಕ್ಕೂಟ ತತ್ವವನ್ನು ನಿರ್ಲಕ್ಷಿಸುತ್ತಿರುವುದರಿಂದ ಅಸಮತೋಲನ ಉಂಟಾಗಿದೆ. ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಅವರ ಪ್ರಕಾರ, 2021-22ರಿಂದ 2025-26ರ ಒಕ್ಕೂಟ ಸರ್ಕಾರದ ತೆರಿಗೆ ರಾಶಿ ಅಂದಾಜು ₹ 135.2 ಲಕ್ಷ ಕೋಟಿ.

ಇದರಲ್ಲಿ ಹಂಚಬಹುದಾದ ಮೊತ್ತ ₹ 103 ಲಕ್ಷ ಕೋಟಿ (ಪ್ರ.ವಾ., ಮಾರ್ಚ್‌ 7). ಏಕೆಂದರೆ ಒಕ್ಕೂಟ ತೆರಿಗೆ ಮೊತ್ತದಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳ ಬಾಬ್ತು ಹಂಚಬಹುದಾದ ರಾಶಿಯಲ್ಲಿ ಸೇರುವುದಿಲ್ಲ. ಅಂದರೆ ಒಕ್ಕೂಟದ ತೆರಿಗೆ ರಾಶಿಯಾದ ₹ 135.2 ಲಕ್ಷ ಕೋಟಿಯಲ್ಲಿ ರಾಜ್ಯಗಳಿಗೆ ₹ 55.43 ಲಕ್ಷ ಕೋಟಿ ದೊರೆಯಬೇಕಾಗಿತ್ತು (ಶೇ 41). ಆದರೆ ಈಗ ದೊರೆಯುತ್ತಿರುವುದು ಕೇವಲ ₹ 42.2 ಲಕ್ಷ ಕೋಟಿ. ಒಕ್ಕೂಟದ ತೆರಿಗೆ ರಾಶಿಯಲ್ಲಿ ಸೆಸ್ ಮತ್ತು ಸರ್‌ಚಾರ್ಚ್‌ಗಳ ಪ್ರಮಾಣ 2011-12ರಲ್ಲಿ ಶೇ 10.4ರಷ್ಟಿದ್ದುದು 2020-21ರಲ್ಲಿ ಶೇ 20ಕ್ಕೇರಿದೆ.

ಒಕ್ಕೂಟ ಸರ್ಕಾರದ ಹಂಚಬಹುದಾದ ತೆರಿಗೆ ರಾಶಿಯಲ್ಲಿ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶೇ 4.71ರಷ್ಟನ್ನು ಶಿಫಾರಸು ಮಾಡಿದ್ದರೆ 15ನೇ ಹಣಕಾಸು ಆಯೋಗವು ಶೇ 3.64ರಷ್ಟನ್ನು ಶಿಫಾರಸು ಮಾಡಿದೆ. ಅಂದರೆ ಮುಂದಿನ ಐದು ವರ್ಷಗಳಲ್ಲಿ (2021-22ರಿಂದ 2025-26) ಒಕ್ಕೂಟ ತೆರಿಗೆ ರಾಶಿಯಲ್ಲಿ (₹ 103 ಲಕ್ಷ ಕೋಟಿ) ಕರ್ನಾಟಕದ ಪಾಲು ವಾರ್ಷಿಕ ₹ 75,000 ಕೋಟಿ. ಒಂದು ಅಧ್ಯಯನದ ಪ್ರಕಾರ, 2017ರಲ್ಲಿ ಕರ್ನಾಟಕವು ಒಕ್ಕೂಟಕ್ಕೆ (ಕೇಂದ್ರಕ್ಕೆ) ನೀಡಿದ ಪ್ರತೀ ₹ 100 ಮೊತ್ತದ ತೆರಿಗೆಗೆ ಪ್ರತಿಯಾಗಿ ತೆರಿಗೆಯ ವರ್ಗಾವಣೆ ಮೂಲಕ ರಾಜ್ಯ ಪಡೆದ ಮೊತ್ತ ಕೇವಲ ₹ 36. ಮೇಲಾಗಿ ತೈಲದ ಮೇಲೆ ಒಕ್ಕೂಟ ವಿಧಿಸುವ ತೆರಿಗೆ ಸಹ ಹಂಚಬಹುದಾದ ತೆರಿಗೆ ರಾಶಿಯಲ್ಲಿ ಸೇರುವುದಿಲ್ಲ. ಏಕೆಂದರೆ ಇದು ಜಿಎಸ್‍ಟಿ ಭಾಗವಲ್ಲ. ಈ ಅಸಮತೋಲನವನ್ನು ಶೀಘ್ರ ಸರಿಪಡಿಸದಿದ್ದರೆ ಒಕ್ಕೂಟ ಮತ್ತು ರಾಜ್ಯಗಳ ನಡುವಣ ಸಂಬಂಧ ವಿವಾದಾತ್ಮಕವಾಗುವ ಸಾಧ್ಯತೆಯಿದೆ.

ADVERTISEMENT

-ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.