ಇದೇ 27ರಂದು ನಡೆದ ಭಾರತ್ ಬಂದ್ ಭಾಗಶಃ ಯಶಸ್ಸನ್ನಷ್ಟೇ ಕಂಡಿದೆ. ಸರ್ಕಾರ ಮತ್ತು ಚಳವಳಿಕಾರರು ರೈತ ಸಂಬಂಧಿ ಕಾನೂನುಗಳ ವಿಷಯದಲ್ಲಿ ಹಟಮಾರಿತನ ತೊರೆದು, ವ್ಯಾವಹಾರಿಕತೆ ತೋರಬೇಕಾಗಿದೆ. ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿ ವರದಿ ಪಡೆದಿದ್ದರೂ ಇದು ನೀತಿಯ ವಿಷಯ ಆಗಿರುವುದರಿಂದ ನಿರ್ದೇಶನ ಸ್ವರೂಪದ ಆದೇಶ– ತೀರ್ಪು ನೀಡುವುದು ಕಷ್ಟ.
ಕೃಷಿ ಉತ್ಪನ್ನಗಳ ಮಾರಾಟದ ವಿಷಯದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಒಂದೇ ಸ್ಥಿತಿ ಇಲ್ಲ (ಉದಾಹರಣೆಗೆ, ಕರ್ನಾಟಕ ಮತ್ತು ಪಂಜಾಬ್). ಈಗಾಗಲೇ ಇರುವ ವ್ಯವಸ್ಥೆಗೆ ಸಾರ್ವಜನಿಕ ಹಣ ಖರ್ಚಾಗಿದೆ, ಅದನ್ನು ಮುಂದುವರಿಸುತ್ತೇವೆ ಎನ್ನುವುದಾದರೆ ಪ್ರತೀ ವರ್ಷ ಬಜೆಟ್ ನೀಡಬೇಕು. ಕೊಳೆತುಹೋಗುವ ಸಂಭವದ ದೃಷ್ಟಿಯಿಂದ ಹೂವು, ತರಕಾರಿ, ಹಣ್ಣು ಈ ಅನುಕ್ರಮದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ತ್ವರಿತ ವ್ಯವಸ್ಥೆ ಬೇಕು. ಅಲ್ಲಿಂದ ತಾಲ್ಲೂಕು ಕೇಂದ್ರ ಅಥವಾ ರಾಜಧಾನಿ ಸೇರಲು ಸಾರಿಗೆ ಹಾಗೂ ಸಂರಕ್ಷಣಾ ಸಾಧನ ಇರಬೇಕಾಗುತ್ತದೆ. ಮಾತುಕತೆಗೆ ಸಿದ್ಧ, ತಿದ್ದುಪಡಿ ಪರಿಶೀಲಿಸುತ್ತೇವೆ, ಆದರೆ ಕಾನೂನು ರದ್ದು ಅಸಾಧ್ಯ- ಈ ನಿಲುವು ಎಲ್ಲಿಗೂ ತಲುಪದು. ಹಾಗೆಯೇ ಸರ್ಕಾರಗಳು ಎಲ್ಲ ಉತ್ಪನ್ನಗಳ ಬೆಲೆ, ಮಾರಾಟಕ್ಕೆ ಹೊಣೆ ಎನ್ನುವುದೂ ಸರಿಯಲ್ಲ (ವೆಲ್ಫೇರ್ ಸ್ಟೇಟ್ ಹಳೆಯ ಪರಿಕಲ್ಪನೆ).
– ಎಚ್.ಎಸ್.ಮಂಜುನಾಥ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.