ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜಭವನದ ಕಡೆಗೆ ನಿರ್ಲಕ್ಷ್ಯ ಮತ್ತು ಅತಿವೇಗದಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದ ತರುಣಿಯನ್ನು ತಡೆದು ಪೊಲೀಸರು ₹ 1,000 ದಂಡ ವಿಧಿಸಿದ್ದಾರೆ. ಈ ತರುಣಿ ಸಂಚಾರ ನಿಯಮವನ್ನು ಮೀರಿರುವುದು ಇದೇ ಮೊದಲಲ್ಲ. ಒಂಬತ್ತು ಸಾರಿ ತಪ್ಪು ಮಾಡಿದ್ದು, ಅದೂ ಸೇರಿಸಿ ಈಗ ಕಟ್ಟಿರುವ ಜುಲ್ಮಾನೆ ಹತ್ತು ಸಾವಿರ ರೂಪಾಯಿ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡ ಮೇಲೆ ‘ನಾನು ಯಾರು ಗೊತ್ತಾ? ಶಾಸಕ ಅರವಿಂದ ಲಿಂಬಾವಳಿ ಪುತ್ರಿ. ನನ್ನಲ್ಲಿ ಎಲ್ಲ ದಾಖಲೆಗಳಿವೆ, ನನ್ನನ್ನು ತಡೆದರೆ ಪರಿಣಾಮ ನೆಟ್ಟಗಿರದು’ ಎಂದು ದುಂಡಾವರ್ತಿಯಿಂದ ಆಕೆ ಪೊಲೀಸರ ಮೇಲೆ ಧಮಕಿ ಹಾಕಿದ್ದಾಳೆ. ಅವಳು ತಪ್ಪು ಎಸಗಿರುವುದಕ್ಕೆ ಅವಳ ಹಿಂದಿನ 9 ಪುರಾವೆಗಳಿವೆ.
ಆದರೆ ಈಕೆ ಕಾರು ಚಲಾಯಿಸುತ್ತಿರಲಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ನಡೆದಿದೆ. ಇದು ಮೂರ್ಖತನದ ಪರಮಾವಧಿ. ಟಿ.ವಿ.ಯಲ್ಲಿ ಪ್ರಸಾರವಾದ ದೃಶ್ಯಗಳನ್ನು ನೋಡಿದರೆ ತಿಳಿಯುತ್ತದೆ, ಆಕೆ ಪೊಲೀಸರ ಮೇಲೆ ಧಮಕಿ ಹಾಕಿ ನೇರವಾಗಿ ಚಾಲಕನ ಸ್ಥಳದಲ್ಲಿ ಕುಳಿತಿದ್ದು. ಈಕೆಯದು ತಪ್ಪು ತಿಳಿಯದ ಎಳೆಯ ಪ್ರಾಯವಲ್ಲ. ತಪ್ಪೆಸಗಿ ಪೊಲೀಸರ ಜೊತೆ ಜಗಳಕ್ಕೆ ಇಳಿಯದೆ, ತಪ್ಪನ್ನು ಒಪ್ಪಿಕೊಂಡಿದ್ದರೆ ಅಂತಹ ಆದರ್ಶವು ಆಕೆಯನ್ನು ದೊಡ್ಡ ಮನುಷ್ಯಳನ್ನಾಗಿ ಮಾಡುತ್ತಿತ್ತು. ಜನಪ್ರತಿನಿಧಿಯ ಮಗಳು ಎಂದು ಹೇಳಿದರೂ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಿದ ಪೊಲೀಸರ ಕ್ರಮ ಅಭಿನಂದನಾರ್ಹ.
-ಟಿ.ಎಂ.ಶಿವಶಂಕರ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.