ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ತೀರಾ ಬಡವರಿಗಾಗಿ ಕೇವಲ ಒಂದು ರೂಪಾಯಿ ದರದಲ್ಲಿ ತಮ್ಮ ಕ್ಷೇತ್ರದಲ್ಲಿ ‘ಜನ್ ರಸೋಯಿ’ ಕ್ಯಾಂಟೀನ್ ಅನ್ನು ಇತ್ತೀಚೆಗೆ ಆರಂಭಿಸಿರುವುದು ಮಾದರಿಯಾದ ಕಾರ್ಯ.
ಈ ಹಿಂದೆ ಜೆ.ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾಗ ಆ ರಾಜ್ಯದಲ್ಲಿ ಆರಂಭಿಸಿದ್ದ ‘ಅಮ್ಮ’ ಕ್ಯಾಂಟೀನ್ ದೇಶದಾದ್ಯಂತ ಭಾರಿ ಜನಪ್ರಿಯವಾಗಿತ್ತು. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ‘ಇಂದಿರಾ ಕ್ಯಾಂಟೀನ್’ ಕೂಡ ಭಾರಿ ಮೆಚ್ಚುಗೆ ಪಡೆದಿತ್ತು. ಆದರೆ, ಈ ಎರಡೂ ಕಡೆ ಇದ್ದದ್ದು ಪೂರ್ಣ ಪ್ರಮಾಣದ ಸರ್ಕಾರಗಳು. ಹೀಗಾಗಿ ಅನುದಾನಕ್ಕೆ ಅಷ್ಟೇನೂ ತೊಂದರೆ ಆಗಿರುವುದಿಲ್ಲ. ಆದರೆ ಗಂಭೀರ್ ಅವರು ಸರ್ಕಾರ ಹಾಗೂ ಸಂಸದರ ಅನುದಾನದಿಂದ ಯಾವುದೇ ಹಣವನ್ನು ಪಡೆಯದೆ, ತಮ್ಮದೇ ಗಂಭೀರ್ ಫೌಂಡೇಶನ್ನಿಂದ ಹಣ ವಿನಿಯೋಗಿಸಿ ಪಕ್ಷಾತೀತವಾಗಿ ಜನಸೇವೆ ಮಾಡುತ್ತಿರುವುದು ಗಮನಾರ್ಹ. ಪ್ರಣಾಳಿಕೆಯಲ್ಲಿ ಪೊಳ್ಳು ಆಶ್ವಾಸನೆಗಳನ್ನು ನೀಡುವ ಪಕ್ಷಗಳು, ಮಂತ್ರಿಗಿರಿ ಅಥವಾ ಇತರ ಲಾಭಕರ ಹುದ್ದೆಗಾಗಿ ಪೈಪೋಟಿ ನಡೆಸುವ ರಾಜಕಾರಣಿಗಳು ಈ ಯುವ ಸಂಸದನನ್ನು ನೋಡಿ ಕಲಿಯಬೇಕು. ಇಂತಹ ಇನ್ನಷ್ಟು ರಾಜಕಾರಣಿಗಳ ಅವಶ್ಯಕತೆ ಸಮಾಜಕ್ಕೆ ಈಗ ಇದೆ.
-ಅನಿಲ್ ಕುಮಾರ್, ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.