ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಗ್ರಾಮದ ಡಿ.ರಂಗಸ್ವಾಮಿ ಎಂಬ ಯುವಕ ಅಪಘಾತ ತಡೆಗೆ ‘ಸಂಜೀವಿನಿ’ ಎಂಬ ತರುಣರ ತಂಡ ರಚಿಸಿಕೊಂಡು, ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ.
ಇಂದಿನ ಯುವ ಸಮುದಾಯ ತಮ್ಮ ಶಕ್ತಿಯನ್ನು ಅನಗತ್ಯ ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ರಂಗಸ್ವಾಮಿ ಮತ್ತು ಅವರ 300 ಸದಸ್ಯರ ತಂಡವು ಮಾನವೀಯತೆಯ ಮಹಾಕಾರ್ಯಕ್ಕೆ ಮುಂದಾಗಿರುವುದು ಚಿತ್ರದುರ್ಗ ಜಿಲ್ಲೆ ಹೆಮ್ಮೆಪಡುವ ವಿಷಯ. ತಂಡಕ್ಕೆ ಸಂಜೀವಿನಿ ಎಂದು ಹೆಸರು ಇಟ್ಟಿರುವುದಂತೂ ಅರಿವಿನ ಸಂಕೇತ ಎನ್ನಬಹುದು. ಇಂತಹುದೇ ಒಂದು ಘಟನೆ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿತ್ತು. ರಸ್ತೆ ದಾಟುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಒದ್ದಾಡುತ್ತಿದ್ದ ನರಿಯನ್ನು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಉಪಚರಿಸಿದ್ದು ವರದಿಯಾಗಿತ್ತು. ಚಿತ್ರದುರ್ಗವು ಸಾಹಸ, ಶೌರ್ಯ, ತ್ಯಾಗ, ಪರೋಪಕಾರ, ಗುರುಭಕ್ತಿ, ಪರಾಕ್ರಮಗಳಿಂದ ಇತಿಹಾಸ ನಿರ್ಮಿಸಿದೆ. ಈಗ ಇಂತಹ ಮಾನವೀಯ ಸೇವೆಯಿಂದ ಜಿಲ್ಲೆಯು ಮತ್ತೆ ಮತ್ತೆ ಚಿರಸ್ಥಾಯಿಯಾಗಿ ಬೆಳಗಲಿ.
ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.