ಕೊರೊನಾ ಸಂಕಷ್ಟದ ಪರಿಸ್ಥಿತಿ ನಿರ್ವಹಣೆಗೆ ಸಾರ್ವಜನಿಕರಿಂದ ದೇಣಿಗೆ ಕೋರಿದ ಮುಖ್ಯಮಂತ್ರಿ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ ಇಬ್ಬರು ಶಿಕ್ಷಕರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಅಮಾನತು ಮಾಡಿದ್ದಾರೆ (ಪ್ರ.ವಾ., ಮಾರ್ಚ್ 31). ಮುಖ್ಯಮಂತ್ರಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳೂ ಸರಿಯಾದವೇ ಆಗಿರುತ್ತವೆಯೇ? ಅವರ ಸ್ವಯಂ ವಿವೇಚನೆಯನ್ನೂ ಮೀರಿ ಕೆಲವು ಬಾರಿ ತಪ್ಪಾಗಿರುವ ಸಾಧ್ಯತೆಯೂ ಇರುತ್ತದೆ. ಹಾಗೆಂದು ಅದನ್ನು ಅವರಿಗೆ ತೋರಿಸಿ ಎಚ್ಚರಿಸುವುದು ತಪ್ಪೇ?
ಅನ್ಯರು ತನ್ನ ತಪ್ಪು ತೋರಿಸಿದಾಗ ಎಚ್ಚೆತ್ತುಕೊಂಡು ನಡೆಯುವವನು ನಿಜವಾದ ನಾಯಕ. ಆನೆ ನಡೆದದ್ದೇ ದಾರಿ ಎಂಬಂತೆ ಆಗಬಾರದು. ಅದರಲ್ಲೂ ಟೀಕಿಸಿರುವವರು ಸಾಮಾನ್ಯರಲ್ಲ. ಇಂದಿನ ಮಕ್ಕಳನ್ನು ಮುಂದಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಹೊತ್ತ ಶಿಕ್ಷಕರು. ಸರ್ಕಾರದ ಈ ನಡೆ ಸಾಧುವಲ್ಲ, ಕೂಡಲೇ ಅವರ ಅಮಾನತನ್ನು ಹಿಂಪಡೆಯಲಿ. ಅಂದಹಾಗೆ, ಮುಖ್ಯಮಂತ್ರಿ ಟೀಕಾತೀತರೇ, ಪ್ರಶ್ನಾತೀತರೇ?
-ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.