ಕೊರೊನಾ ಎರಡನೇ ಅಲೆಯ ತೀವ್ರತೆಯು ಮನುಷ್ಯರನ್ನು ಎಷ್ಟರಮಟ್ಟಿಗೆ ಬಾಧಿಸುತ್ತಿದೆ ಎಂಬುದರ ಅರಿವು ಈಗಾಗಲೇ ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಹಾಗಾಗಿ ಕೊರೊನಾವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಬೇರೆ ಯಾವುದೇ ಕಾಯಿಲೆ ನಿಮ್ಮನ್ನು ಆವರಿಸಿಕೊಂಡಿದ್ದರೆ ಮನೆಯವರ ಆರೈಕೆಯಿಂದಲೇ ನೀವು ಅದನ್ನು ಅರ್ಧ ಜಯಿಸಿ ಬಿಡಬಹುದಿತ್ತು. ಆದರೆ ಇದು ಹಾಗಲ್ಲ. ನಿಮಗೆ ಕೋವಿಡ್ ಇರುವುದು ದೃಢಪಡುತ್ತಿದ್ದಂತೆಯೇ ಎಲ್ಲರೂ ನಿಮ್ಮಿಂದ ಅನಿವಾರ್ಯವಾಗಿ ಅಂತರ ಕಾಪಾಡಿಕೊಳ್ಳಲೇ ಬೇಕಾಗುತ್ತದೆ. ಮನೆಯವರನ್ನೂ ಒಳಗೊಂಡಂತೆ ಯಾರೂ ನಿಮ್ಮ ಬಳಿ ಬರುವ ಹಾಗಿಲ್ಲ, ನಿಮ್ಮನ್ನ ತುಂಬಾ ಹತ್ತಿರದಿಂದ ನೋಡುವ ಹಾಗಿಲ್ಲ. ಜೊತೆಗಿದ್ದು ಕಷ್ಟ ಸುಖವನ್ನು ವಿಚಾರಿಸಿ ಹತ್ತಿರದಿಂದ ಆರೈಕೆ ಮಾಡುವಂತಿಲ್ಲ.
ಇದರಿಂದಾಗಿಯೇ ನಿಮಗೆ ಕೆಲವೊಮ್ಮೆ ಏಕಾಂಗಿತನ ಕಾಡಿಬಿಡಬಹುದು, ನೀವು ಅರ್ಧ ಕುಗ್ಗಿ ಹೋಗಬಹುದು, ನಿಮ್ಮಲ್ಲಿ ಆತ್ಮವಿಶ್ವಾಸ ಕಳೆದುಹೋಗಬಹುದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ ನೀವು ಆದಷ್ಟು ನಿಮ್ಮ ಮನಸ್ಸನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ಮನೋಬಲ ಹೆಚ್ಚಿಸಿಕೊಳ್ಳಬೇಕು. ಮನೋಬಲ ಹೆಚ್ಚಾದಂತೆ, ದೇಹ ಬಲವೂ ಹೆಚ್ಚಾಗುತ್ತದೆ. ಆಗ ನೀವು ಖಂಡಿತಾ ಗುಣಮುಖರಾಗಿ ಹೊರ ಬರಬಹುದು.
–ರಾಘವೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.