ಓಮೈಕ್ರಾನ್ ಸೋಂಕಿನ ಭೀತಿಯ ನಡುವೆಯೇ ರಾಜ್ಯದಾದ್ಯಂತ ಕೋವಿಡ್ ಲಸಿಕೆ ನೀಡುವ ಕಾರ್ಯ ಯಶಸ್ವಿಯಾಗಿ ಸಾಗಿರುವುದು ಹರ್ಷದಾಯಕ ಸುದ್ದಿ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಯುವ ನೆಲೆಗಳಿಗೇ ಹೋಗಿ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುತ್ತಿರುವುದು, ಜನ ಕೂಡಾ ಅದನ್ನು ಸ್ವೀಕರಿಸುತ್ತಿರುವುದು ಈ ಶತಮಾನದ ಬೃಹತ್ ಲಸಿಕಾ ಅಭಿಯಾನದ ಯಶಸ್ಸನ್ನು ಸಾರುತ್ತಿದೆ. ಆರೋಗ್ಯ ಕಾರ್ಯಕರ್ತೆಯೊಬ್ಬರು ಹುಲ್ಲಿನ ಬಣವೆ ಹಾಕುವ ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ಏಣಿ ಹತ್ತಿ ಲಸಿಕೆ ನೀಡುತ್ತಿದ್ದ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ಚಿತ್ರ ದೇಶದಲ್ಲಿ ಆರೋಗ್ಯ ಸೇವೆ ಸುಧಾರಣೆಯತ್ತ ಸಾಗುತ್ತಿರುವುದಕ್ಕೆ ನಿದರ್ಶನದಂತಿದೆ.
ಇನ್ನು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಲಸಿಕೆ ನೀಡಿಕೆ ಅಭೂತಪೂರ್ವ ಯಶಸ್ಸು ಪಡೆದಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಎರಡನೇ ಡೋಸ್ ಲಸಿಕೆ ವಿತರಣೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿರುವುದು ಮೈಲುಗಲ್ಲು. ಜಿಲ್ಲಾಧಿಕಾರಿ, ತಾಲ್ಲೂಕುಗಳ ಆಡಳಿತ, ಆರೋಗ್ಯ ಕಾರ್ಯಕರ್ತರ ಶ್ರಮ ಶ್ಲಾಘನೀಯ. ರಾಜ್ಯದೆಲ್ಲೆಡೆ ಎರಡನೇ ಡೋಸ್ ವಿತರಣೆ ಪೂರ್ಣಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು.
ಪಟಾಪಟ್ ಶ್ರೀನಿವಾಸ್, ಆನೇಕಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.