ADVERTISEMENT

ವಾಚಕರ ವಾಣಿ | ‘ದಂಡಿಸುವ’ ಕ್ಷಣ ಬೇಗ ಬರಲಿ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಮೇ 2022, 19:45 IST
Last Updated 15 ಮೇ 2022, 19:45 IST

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್‌ನ ಎರಡು ಸ್ತಂಭಗಳು. ಐದಾರು ವರ್ಷಗಳಿಂದ ಇಡೀ ವಿಶ್ವವೇ ಭಾರತ ತಂಡವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಕಾಲ. ಇವರಿಬ್ಬರೂ ಬ್ಯಾಟಿಂಗ್‌ಗೆ ಇಳಿದರೆಂದರೆ ರನ್ ಮಳೆ ಸುರಿಯುತ್ತಿತ್ತು. ಅಷ್ಟರಮಟ್ಟಿಗೆ ಎದುರಾಳಿ ಬೌಲರ್‌ಗಳಿಗೆ ಭಯ ಹುಟ್ಟಿಸಿದ್ದರು. ರನ್ ಮಷೀನ್, ಕಿಂಗ್ ಕೊಹ್ಲಿ ಎಂಬಂಥ ಅನೇಕ ಬಿರುದಾಂಕಿತಗಳನ್ನು ಪಡೆದಿದ್ದ ಕೊಹ್ಲಿ ಹಿಂದೆಂದೂ ಕಾಣದಷ್ಟು ವೈಫಲ್ಯ ಅನುಭವಿಸಿದ್ದಾರೆ. ಒಂದೇ ಐಪಿಎಲ್‌ನಲ್ಲಿ ನಾಲ್ಕು ಶತಕ, ಏಳು ಅರ್ಧಶತಕಗಳನ್ನು ಗಳಿಸಿದ್ದ ಅವರು ಈ ಬಾರಿ ಒಂದೇ ಅರ್ಧ ಶತಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿರುವುದು ನೋವಿನ ಸಂಗತಿ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅವರ ಬ್ಯಾಟಿಂಗ್‌ ಸಪ್ಪೆಯಾಗಿದೆ.

ರೋಹಿತ್ ಶರ್ಮಾ ವಿಶ್ವ ದಾಖಲೆಯ ಸರದಾರ. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್. ಇವರು ಕೂಡ ತಂಡದೊಂದಿಗೆ ತಾವೂ ವೈಫಲ್ಯ ಅನುಭವಿಸುತ್ತಿದ್ದಾರೆ. ಇವರಿಬ್ಬರ ಈ ಕಳಪೆ ಫಾರ್ಮ್ ಮುಂಬರುವ ಟಿ20 ವಿಶ್ವಕಪ್ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಕಾರಣ ಅವರ ಬಿಡುವಿಲ್ಲದ ವೇಳಾಪಟ್ಟಿ. ಕ್ರಿಕೆಟ್ ವರ್ಷವಿಡೀ ನಡೆಯುವ ಹಬ್ಬ. ಇವರಿಬ್ಬರೂ ಪ್ರಮುಖ ಆಟಗಾರರಾಗಿರುವುದರಿಂದ ಪ್ರತೀ ಪಂದ್ಯಕ್ಕೂ ಇವರ ಲಭ್ಯತೆ ಅನಿವಾರ್ಯವಾಗಿರುತ್ತದೆ. ವಿಶ್ರಾಂತಿ ಇಲ್ಲದಿದ್ದಾಗ ಈ ರೀತಿಯ ಪ್ರದರ್ಶನ ಸಹಜವೆ. ಆದ್ದರಿಂದ ಒಂದು ತಿಂಗಳ ಮಟ್ಟಿಗೆ ಈ ಇಬ್ಬರಿಗೂ ವಿಶ್ರಾಂತಿ ನೀಡುವುದು ಒಳ್ಳೆಯದು. ಈ ಎಲ್ಲಾ ಕೆಟ್ಟದಿನಗಳಿಂದ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಹೊರಬಂದು ಹೊಸ ಹುಮ್ಮಸ್ಸಿನೊಂದಿಗೆ ಬೌಲರ್‌ಗಳನ್ನು ‘ದಂಡಿಸುವ’ ಕ್ಷಣ ಬೇಗ ಬರುವಂತಾಗಲಿ.

–ಮಣಿಕಂಠ ಪಾ. ಹಿರೇಮಠ, ಚವಡಾಪೂರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.