ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ/ ಸಹಾಯಕ ಕಮ್ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ಭರ್ತಿಗಾಗಿ 2015ರ ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿತ್ತು.
ಇದೇ ಹುದ್ದೆಗಳಿಗೆ 2016ರ ಮಾರ್ಚ್ ತಿಂಗಳಿನಲ್ಲಿ ಪುನಃ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಪುನಃ ಅವಕಾಶ ಒದಗಿಸಲಾಯಿತು. ಅದರಂತೆ ಅರ್ಜಿ ಸಲ್ಲಿಸಿದ ಒಂದು ವರ್ಷದ ನಂತರ, 2017ರ ಮಾರ್ಚ್ 19ರಂದು ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಯಿತು.
ಪರೀಕ್ಷೆಗೆ ಮುನ್ನ ನಮ್ಮ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ವಿಶ್ವವಿದ್ಯಾಲಯದವರು ಪಡೆದಿದ್ದರು. ಪರೀಕ್ಷೆ ಮುಗಿದು ಒಂದು ತಿಂಗಳ ನಂತರ ಸರಿ ಉತ್ತರ (ಕೀ ಆನ್ಸರ್ಸ್) ಗಳನ್ನು ಸಹ ಪ್ರಕಟಿಸಲಾಯಿತು.
ಇದಾಗಿ ಹಲವು ತಿಂಗಳುಗಳು ಕಳೆದರೂ ಆಯ್ಕೆ ಪಟ್ಟಿ ಪ್ರಕಟಿಸಲಿಲ್ಲ. ದೂರವಾಣಿ ಮೂಲಕ ವಿಶ್ವವಿದ್ಯಾಲಯ
ವನ್ನು ಸಂಪರ್ಕಿಸಿದಾಗ, ‘ದಾಖಲೆಗಳ ಪರಿಶೀಲನೆ ನಡೆಯುತ್ತಿದೆ, ಕೆಲ ದಿನಗಳ ನಂತರ ಆಯ್ಕೆ ಪಟ್ಟಿ ಪ್ರಕಟಿಸುತ್ತೇವೆ’ ಎಂದು ಹೇಳುತ್ತಿದ್ದರು. ಆದರೆ ಈಗ ಅದೇ ಹುದ್ದೆಗಳಿಗೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ.
ಈಗಾಗಲೇ ಪರೀಕ್ಷೆ ಬರೆದವರು ಆಯ್ಕೆಗಾಗಿ ಮೂರು ವರ್ಷಗಳಿಂದ ಕಾದು ಕುಳಿತಿದ್ದಾರೆ. ಅವರಲ್ಲಿ ಕೆಲವರ ವಯಸ್ಸು ಮೀರಿದೆ, ಇನ್ನೂ ಕೆಲವರು ವಯಸ್ಸು ಮೀರುವ ಹಂತದಲ್ಲಿದ್ದಾರೆ.
ನೇಮಕಾತಿ ಪ್ರಕ್ರಿಯೆಯನ್ನು ಪುನಃ ಆರಂಭಿಸಿದರೆ ಈಗಾಗಲೇ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಪುನಃ ಯಾಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂಬುದಕ್ಕೆ ಸರಿಯಾದ ಉತ್ತರವೂ ಲಭಿಸುತ್ತಿಲ್ಲ. ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮಧ್ಯಪ್ರವೇಶಿಸಿ ಈಗಾಗಲೇ ಪರೀಕ್ಷೆ ಬರೆದು, ಆಯ್ಕೆಗಾಗಿ ಕಾಯ್ದು ಕುಳಿತಿರುವವರಿಗೆ ನ್ಯಾಯ ಒದಗಿಸಬೇಕು.
ವೈ.ಎಚ್. ಮಡಿವಾಳರ, ಎಂ.ಜೆ.ಮುಲ್ಲಾ, ನಾರಾಯಣ, ಎಂ.ಎಚ್.ಮೊಕಾಸಿ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.