ಕನ್ನಡ ನಾಡು, ನುಡಿ, ಸಂಸ್ಕೃತಿಯ ಸಂವರ್ಧನೆಗಾಗಿ ಶ್ರಮಿಸುತ್ತಿರುವ ಬಿ.ಎಂ.ಶ್ರೀ. ಪ್ರತಿಷ್ಠಾನ, ಉದಯಭಾನು ಕಲಾಸಂಘ, ಕನ್ನಡ ಯುವಜನ ಸಂಘ ಮೊದಲಾದ ಅನೇಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದಲೂ ಉದಾರವಾದ ಧನಸಹಾಯ ನೀಡುತ್ತಿತ್ತು. ಈ ಹಿಂದಿನ ಸರ್ಕಾರ ಅದರಲ್ಲಿ ಅರ್ಧಕ್ಕರ್ಧ ಕಡಿತಗೊಳಿಸಿ, ಅಧಿಕಾರ ಕೊನೆಗೊಳ್ಳುವ ಮುನ್ನ ತೀರಾ ಕೊನೆಗೆ, ಅದೂ ತೀರಾ ಒತ್ತಾಯ ಮಾಡಿದ ಮೇಲೆ ಧನಸಹಾಯ ಬಿಡುಗಡೆ ಮಾಡಿತು. ಆದರೆ ಈಗ ಸುಮಾರು ಎರಡು ವರ್ಷಗಳಿಂದ ಇಂಥ ಧನಸಹಾಯ ಸರ್ಕಾರದ ಕಡೆಯಿಂದ ಬರುವುದು ನಿಂತೇ ಹೋಗಿದೆ.
ಕೋವಿಡ್ ಪರಿಣಾಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಈಗ್ಗೆ ಆರು ತಿಂಗಳಿನಿಂದ ಆ ಬಗ್ಗೆ ಸಂಘ ಸಂಸ್ಥೆಗಳು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈ ನಡುವೆಯೂ ಹೆಚ್ಚು ಖರ್ಚಿಲ್ಲದೆ ವಾಟ್ಸ್ಆ್ಯಪ್, ಫೇಸ್ಬುಕ್, ವೆಬಿನಾರ್ಗಳ ಮೂಲಕ ಕೆಲವು ಕಾರ್ಯಕ್ರಮಗಳನ್ನು ನಡೆಸುತ್ತ ಅಸ್ತಿತ್ವ ಉಳಿಸಿಕೊಂಡಿವೆ. ಸರ್ಕಾರ ಮೊದಲಿನಂತೆ ಧನಸಹಾಯ ನೀಡಿದರೆ ಮಾತ್ರ ಉತ್ಕೃಷ್ಟವಾದ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಸಾಧ್ಯ.
ಡಾ. ಆರ್.ಲಕ್ಷ್ಮೀನಾರಾಯಣ, ನರಸಿಂಹ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.