ರಂಗಭೂಮಿಯನ್ನೇ ಬದುಕಾಗಿಸಿಕೊಂಡ ಸಾವಿರಾರು ರಂಗಕಲಾವಿದರು ರಾಜ್ಯದಲ್ಲಿ ಇದ್ದಾರೆ. ಜನಪದ ಕಲಾವಿದರು, ಹರಿಕಥಾ ಕಲಾವಿದರು, ಹಾಡುಗಾರರು, ವಾದ್ಯಗೋಷ್ಠಿಯವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರು ಕೂಡ ದಿನಗೂಲಿ ನೌಕರರಂತೆ, ತಮ್ಮ ಉದರ ಪೋಷಣೆಗಾಗಿ ದಿನನಿತ್ಯದ ರಂಗ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ವೃತ್ತಿ ಹಾಗೂ ಹವ್ಯಾಸಿ ಕಲಾವಿದರು. ಈಗ ರಂಗ ಚಟುವಟಿಕೆಗಳು ಎಲ್ಲೆಡೆ ಸ್ಥಗಿತಗೊಂಡಿರುವುದರಿಂದ, ಈ ಕಲಾವಿದರ, ತಂತ್ರಜ್ಞರ, ಸಂಗೀತ ವಾದ್ಯ ವೃಂದದವರ ಜೀವನ
ಅತಂತ್ರವಾಗಿದೆ.
ಪೌರಾಣಿಕ ರಂಗಭೂಮಿಯ ಕಲಾವಿದರಿಗಂತೂ ಇದು ಸಂಕಷ್ಟದ ಪರಿಸ್ಥಿತಿಯೇ ಹೌದು. ಏಕೆಂದರೆ ಫೆಬ್ರುವರಿಯಿಂದ ಮೂರು ತಿಂಗಳ ಅವಧಿಯವರೆಗಿನ ದುಡಿಮೆಯೇ ಇವರ ವರ್ಷದ ಕೂಳು. ಈ ಅವಧಿ ಮುಗಿದ ಬಳಿಕ ಪೌರಾಣಿಕ ರಂಗಭೂಮಿಯ ನಾಟಕಗಳು ವಿರಳವಾಗಿ, ಇವನ್ನೇ ನಂಬಿ ಬದುಕುತ್ತಿರುವ ಕಲಾವಿದರಿಗೆ ತಿನ್ನುವ ಅನ್ನಕ್ಕೂ ಗತಿ ಇಲ್ಲದಂತೆ ಆಗುತ್ತದೆ. ಇವರಲ್ಲಿ ಬಹುತೇಕರು ಅವಿದ್ಯಾವಂತರು. ಕಲೆ, ನಾಟಕ, ರಂಗಭೂಮಿ ಹೊರತುಪಡಿಸಿ ಬದುಕುವ ಅನ್ಯ ಮಾರ್ಗ ಅರಿತವರಲ್ಲ. ಇವರಲ್ಲಿ ಶೇಕಡ 80ರಷ್ಟು ಕಲಾವಿದರು ಮಹಿಳೆಯರು. ನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಈ ಕಲಾವಿದರು ಹಾಗೂ ಅವರನ್ನೇ ನಂಬಿರುವ ಅವರ ಕುಟುಂಬದ ಬದುಕಿಗೆ ಧಕ್ಕೆ ಬಾರದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗಮನಹರಿಸಬೇಕು. ಅತಂತ್ರ ಕಲಾವಿದರ ಜೀವನಕ್ಕಾಗಿ ಸೂಕ್ತ ಪರಿಹಾರ ನೀಡಬೇಕು.
-ಡಾ. ಹೆಲನ್, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.