‘ಬಾಹ್ಯಾಡಂಬರ, ಒಣಪ್ರತಿಷ್ಠೆ ಸಲ್ಲ’ ಎನ್ನುವ ಪತ್ರದಲ್ಲಿ (ವಾ.ವಾ., ಮಾರ್ಚ್ 10) ಶಿವನಕೆರೆ ಬಸವಲಿಂಗಪ್ಪ ಅವರು ಮಹಿಳೆಯರ ಸಮಾನತೆಯನ್ನು ಎತ್ತಿ ಹಿಡಿಯುವ ಒಳ್ಳೆಯ ದೃಷ್ಟಿಕೋನದಿಂದಲೇ ಬರಹವನ್ನು ಪ್ರಾರಂಭಿ ಸಿದ್ದರೂ ಕಡೆಗೆ ಮಹಿಳೆಯರು ಮೇಕಪ್ ಮಾಡಿಕೊಳ್ಳುವುದರ ಬಗ್ಗೆ ಅಸಹನೆ ಪ್ರದರ್ಶಿಸಿ, ತಮ್ಮ ಸಂದೇಶವನ್ನು ತಾವೇ ಗೊಂದಲಮಯವಾಗಿಸಿದ್ದಾರೆ. ಹೆಣ್ಣು ತನ್ನ ದೈಹಿಕ ಸೌಂದರ್ಯದ ಬಗ್ಗೆ ತಾಳುವ ನಿಲುವು ಏನೇ ಇದ್ದರೂ ಅದರ ಬಗ್ಗೆ ಹೆಣ್ಣಿನದೇ ಕಡೆಯ ತೀರ್ಮಾನವಾಗಬೇಕು. ಅದರ ಬಗ್ಗೆ ಪೂರ್ವಗ್ರಹ ಪ್ರಚೋದಿತ ತೀರ್ಪುಗಳನ್ನು ನೀಡುವುದು ಗಂಡಸರ ಕೆಲಸವೂ ಅಲ್ಲ, ಅದು ಅವರ ಜನ್ಮಸಿದ್ಧ ಹಕ್ಕೂ ಅಲ್ಲ. ಹೆಣ್ಣು ಮೇಕಪ್ ಮಾಡಿಕೊಂಡರೆ ಪರಿಸರ ಮಾಲಿನ್ಯ ಹೆಚ್ಚುತ್ತದೆ ಎಂದು ವ್ಯಾಖ್ಯಾನಿಸುವುದು ಹಾಸ್ಯಾಸ್ಪದವಲ್ಲವೇ?
ಹೆಣ್ಣಿಗೆ ಸಮಾನತೆ ನೀಡಬೇಕೆಂದು ಹೇಳುತ್ತಲೇ ಅವಳನ್ನು ಪುರುಷ ಪ್ರಧಾನ ಮಾದರಿಗಳಿಗೇ ಒಳಪಡಿಸಿ ಮೌಲ್ಯ ವಿಶ್ಲೇಷಣೆ ಮಾಡುವುದು ಕೂಡ ಜಾಡ್ಯದ ಕುರುಹೇ ಆಗಿದೆ. ಹೆಣ್ಣಿಗೇ ಏಕೆ ಪೋಷಕಹೃದಯ ಇರಬೇಕು? ಅದು ಗಂಡಿಗೆ ಅಷ್ಟು ಮುಖ್ಯವಲ್ಲವೇ? ತಾಯ್ತನವೇ ಅವಳ ಅಂತಿಮ ಸಾರ್ಥಕ್ಯವೇ? ಮಕ್ಕಳನ್ನು ಬೆಳೆಸುವುದು ಗಂಡ ಹೆಂಡಿರಿಬ್ಬರೂ ಸಮಾನವಾಗಿ ಹೊರಬೇಕಾದ ಜವಾಬ್ದಾರಿ ಅಲ್ಲವೇ? ‘ಸರ್ವೇ ಜನಾ ಸುಖಿನೋ ಭವಂತು’ ಆಗಬೇಕಾದರೆ ಪುರುಷ ಸಮಾಜವು ನಿರ್ದೇಶಿಸಿದ ಪಾತ್ರಗಳನ್ನೇ ಹೆಣ್ಣು ನಿರ್ವಹಿಸುತ್ತಾ ತೆಪ್ಪಗಿರಬೇಕಾದುದು ಅನಿವಾರ್ಯವೇ?
–ಪವಮಾನ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.