ವಾಚಕರ ವಾಣಿ
‘ಸುಪ್ರೀಂ’ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ
ಕಟ್ಟಡಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸಂಪರ್ಕ ಪಡೆಯಲು ಕಟ್ಟಡದ ಸ್ವಾಧೀನಾನುಭವ ಪತ್ರವನ್ನು (ಒಸಿ) ಇತ್ತೀಚೆಗೆ ಕಡ್ಡಾಯಗೊಳಿಸಲಾಗಿದೆ (ಪ್ರ.ವಾ., ಜೂನ್ 10). ಇದಕ್ಕೆ ಸುಪ್ರೀಂ ಕೋರ್ಟ್ನ ಆದೇಶ ಕಾರಣವಾಗಿದೆ. ಇದರಿಂದ ಕಂದಾಯ ಮತ್ತು ‘ಬಿ’ ಖಾತಾ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ತೀವ್ರ ತೊಂದರೆಯಾಗಿದೆ. ಹಲವರು ಸಾಲ ಮಾಡಿ ಮನೆ ನಿರ್ಮಿಸಿದ್ದು, ವಿದ್ಯುತ್ ಇಲ್ಲದೆ ಹೊಸ ಮನೆಗೆ ಹೋಗದಂತಾಗಿದೆ.
ಕಟ್ಟಡ ನಿರ್ಮಾಣಕ್ಕೆ ಪಡೆದಿರುವ ಅನುಮೋದಿತ ನಕ್ಷೆಗೂ ನಿರ್ಮಾಣವಾದ ಕಟ್ಟಡಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದು, ನಿಯಮಗಳನ್ನು ಕೆಲವು ಮಾಲೀಕರು ಗಾಳಿಗೆ ತೂರಿರುವುದೇ ಸುಪ್ರೀಂ ಕೋರ್ಟ್ನ ಈ ಆದೇಶಕ್ಕೆ ಕಾರಣ ಎಂಬುದು ಒಪ್ಪುವಂತಹ ವಿಚಾರ. ಈ ಆದೇಶದಿಂದ ಅಕ್ರಮ ಕಟ್ಟಡಗಳಿಗೆ ಕಡಿವಾಣ ಬೀಳಲಿದೆ.
ಕಟ್ಟಡ ನಿರ್ಮಾಣ ಮಾಡುವಾಗಲೇ ಸಂಬಂಧಿಸಿದ ಅಧಿಕಾರಿಗಳು ಪ್ರತಿ ಹಂತದಲ್ಲೂ ಪರೀಕ್ಷಿಸಿ, ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆಯ ನೋಟಿಸ್ ನೀಡಿದ್ದರೆ ಪರಿಸ್ಥಿತಿ ಹದಗೆಡುತ್ತಿರಲಿಲ್ಲ. ಕಡೇಪಕ್ಷ ಈಗಾಗಲೇ ನಿರ್ಮಾಣ ಆರಂಭಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಕಟ್ಟಡಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಬೇಕಿದೆ. ಅಂತೆಯೇ, ಈ ಪ್ರಕ್ರಿಯೆ ಜಾರಿಗೆ ಗಡುವು ನೀಡುವುದು ಉತ್ತಮ. ತಕ್ಷಣದಿಂದಲೇ ಆದೇಶ ಜಾರಿಗೊಂಡಿರುವುದರಿಂದ ಮನೆ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಈ ಆದೇಶದ ವಿರುದ್ಧ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ.
⇒ಪತ್ತಂಗಿ ಎಸ್. ಮುರಳಿ, ಬೆಂಗಳೂರು
ಬಾಲ್ಯವಿವಾಹದ ಮೂಲ ಬೇರು ಕೀಳಬೇಕು
‘ಕುಲಪಂಚಾಯಿತಿ: ಬೇಕು ನಿಯಂತ್ರಣ’ (ಸಂಗತ, ಜೂನ್ 10) ಲೇಖನವು ಬಾಲ್ಯವಿವಾಹದ ಮೂಲ ಬೇರು ಎಲ್ಲಿದೆ ಹಾಗೂ ಈ ಅನಿಷ್ಟ ಪದ್ಧತಿಯನ್ನು ತಡೆಗಟ್ಟುವಲ್ಲಿ ಸಂಬಂಧಿಸಿದ ಇಲಾಖೆಗಳು ವೈಫಲ್ಯ ಕಂಡಿರುವ ಬಗ್ಗೆ ಬೆಳಕು ಚೆಲ್ಲಿದೆ.
ಅಲೆಮಾರಿ, ಆದಿವಾಸಿ ಬುಡಕಟ್ಟುಗಳಲ್ಲಿ ಹೆಚ್ಚಾಗಿ ಬಾಲ್ಯವಿವಾಹ ನಡೆಯುತ್ತಿರುವುದು ದುರಂತ. ಈ ಸಮುದಾಯಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ. ಈ ನಡುವೆಯೇ ಸಮುದಾಯದ ಮಕ್ಕಳು ಬಾಲ್ಯವಿವಾಹದ ಸಂಕೋಲೆಯಲ್ಲಿ ಬಂದಿಯಾಗುತ್ತಿರುವುದು ಅಮಾನವೀಯ. ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದಿರುವ ಕುಲಪಂಚಾಯಿತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
⇒ಅಂಬಿಕಾ ಬಿ.ಟಿ., ಹಾಸನ
ಬಮೂಲ್ ನಡೆ ಸ್ವಾಗತಾರ್ಹ
ಬೆಂಗಳೂರು ಹಾಲು ಒಕ್ಕೂಟವು (ಬಮೂಲ್) ಮಣ್ಣಿನಲ್ಲಿ ಕರಗಬಲ್ಲ ಪೊಟ್ಟಣದಲ್ಲಿ ‘ನಂದಿನಿ’ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜೂನ್ 10). ಇದರಿಂದ ಪರಿಸರಕ್ಕೆ ತುಂಬಾ ಅನುಕೂಲವಾಗಲಿದೆ.
ಇತ್ತೀಚೆಗೆ ದೇವಸ್ಥಾನಗಳಿಗಿಂತ ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ಪ್ರಮಾಣ ಮಿತಿಮೀರಿದೆ. ಮದುವೆ ವೇಳೆ ಬೆಳಿಗ್ಗೆ ನೀಡುವ ಉಪಾಹಾರದಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿ ಊಟದ ವೇಳೆ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ಬಳಕೆ ಸಾಮಾನ್ಯವಾಗಿದೆ. ಊಟದ ನಂತರ ಕಲ್ಯಾಣ ಮಂಟಪದ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲ್ಗಳ ರಾಶಿ ಬಿದ್ದಿರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.
⇒ಕಡೂರು ಫಣಿಶಂಕರ್, ಬೆಂಗಳೂರು
ಸರ್ಕಾರದ ದ್ವಂದ್ವ ನಿಲುವು
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಯುತ್ತಿರುವ ಸಮೀಕ್ಷಾ ಕಾರ್ಯ ಇನ್ನೂ ಪೂರ್ಣಗೊಳ್ಳದ ಕಾರಣ ಸರ್ಕಾರವು ಕಾಲಾವಧಿಯನ್ನು ವಿಸ್ತರಣೆ ಮಾಡುತ್ತಲೇ ಇದೆ. ಸಮೀಕ್ಷೆ ಬಗ್ಗೆ ಘೋಷಣೆ ವೇಳೆ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಹೊಸ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು.
ಇತ್ತೀಚೆಗೆ ಕೆಲವೊಂದು ಇಲಾಖೆಗಳಲ್ಲಿ ಬಡ್ತಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿರುವುದು ವರದಿಯಾಗಿದೆ. ಹೀಗಾದರೆ ಹೊಸ ನೇಮಕಾತಿಗೆ ಮಾತ್ರವಷ್ಟೇ ಗ್ರಹಣ ಹಿಡಿದಿರುವುದು ಏಕೆ? ಸರ್ಕಾರದ ಈ ನಡೆ ಸರಿಯಲ್ಲ. ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ನೇಮಕಾತಿಗಾಗಿ ಕಾದು ಕುಳಿತಿದ್ದಾರೆ. ಬಡ್ತಿ ಪ್ರಕ್ರಿಯೆ ನಡೆಯುತ್ತಿದೆ ಎಂದಾದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೂ ಅಧಿಸೂಚನೆ ಪ್ರಕಟಿಸಬೇಕಿದೆ.
⇒ಇಂಗಳೇಶ್ವರ ಸತೀಶ್, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.