ADVERTISEMENT

ಮಿತ್ರರೇ ಶತ್ರುವಾದರೆ...

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 19:56 IST
Last Updated 12 ಜುಲೈ 2018, 19:56 IST
   

ಜೆಡಿಎಸ್‌ ಜೊತೆ ಕೈಜೋಡಿಸಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್‌ ನಡೆಯಲ್ಲಿ ಸ್ವಹಿತಾಸಕ್ತಿಯೂ ಇದೆ. ಅಧಿಕಾರದಿಂದ ವಂಚಿತರಾದ ಬಿಜೆಪಿ ನಾಯಕರು ಕೆರಳಿ, ಸಮ್ಮಿಶ್ರ ಸರ್ಕಾರ ಉರುಳಿಸಲು ಹುನ್ನಾರ ಹೂಡುವುದು ಅನಿರೀಕ್ಷಿತವಲ್ಲ. ಆದಕಾರಣ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಮಿತ್ರರೇ ಶತ್ರುಗಳಂತೆ ದಿನಕ್ಕೊಂದು ಹೇಳಿಕೆ ನೀಡುವುದು, ಪತ್ರ ಸಮರಕ್ಕಿಳಿದಿರುವುದು ವಿವೇಕಯುತ ನಡವಳಿಕೆಯಾಗದು.

ಕಾಂಗ್ರೆಸ್ಸಿನ ಸಚಿವ ಸ್ಥಾನ ವಂಚಿತ ಶಾಸಕರು ಹಾಗೂ ಜೆಡಿಎಸ್‌ ವಿರೋಧಿಗಳು ಯಾವ್ಯಾವುದೋ ಕಾರಣಕ್ಕೆ ಅಪಶ್ರುತಿ ನುಡಿಸುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರೂ ಆಗಾಗ ಇವರ ಜೊತೆ ಕೈಜೋಡಿಸಿ ಸರ್ಕಾರದ ವಿರುದ್ಧ ಹರಿಹಾಯುತ್ತಾರೆ. ಇದರ ಪರಿಣಾಮ ಏನಾಗಬಹುದೆಂಬುದನ್ನು ತಿಳಿಯುವುದು ಒಳ್ಳೆಯದು.

ರೈತರ ಸಾಲ ಮನ್ನಾಕ್ಕೆ ಒಪ್ಪಿದ ಮೇಲೆ ಸಂಪನ್ಮೂಲ ಹೊಂದಿಸಿಕೊಳ್ಳಲು ಬೇರೆ ಯಾವುದೋ ಯೋಜನೆಯ ವೆಚ್ಚ ಕಡಿತ ಹಾಗೂ ಕೆಲವು ವಸ್ತುಗಳ ಬೆಲೆ ಏರಿಕೆ ಅನಿವಾರ್ಯವಲ್ಲವೇ? ಕೇಂದ್ರ ಸರ್ಕಾರವೂ ಇಂಥ ಕೆಲಸಗಳನ್ನು ಆಗಾಗ್ಗೆ ಮಾಡಿದೆ. ಸಾಲ ಸಂಪೂರ್ಣ ಮನ್ನಾ ಆಗಬಾರದು, ಬೆಲೆ ಏರಬಾರದು ಎಂಬ ವಾದದ ಹಿಂದಿನ ಉದ್ದೇಶವೇನು?

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಸವಲತ್ತುಗಳಿದ್ದರೂ ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಹೋಗುವವರಿಗೆ ಸರ್ಕಾರವು ಉಚಿತ ಬಸ್ ಪಾಸ್ ಕೊಡುವ ಅಗತ್ಯವೇನಿದೆ? ಹಿಂದೆ ಉಚಿತವಾಗಿ 7 ಕೆ.ಜಿ. ಅಕ್ಕಿ ವಿತರಣೆಯನ್ನು ವಿರೋಧಿಸುತ್ತಿದ್ದವರು, ಈಗ 2 ಕೆ.ಜಿ. ಕಡಿಮೆ ಮಾಡಿದ್ದಕ್ಕೂ ವಿರೋಧ ಮಾಡುತ್ತಿದ್ದಾರಲ್ಲ!

ಎಲ್ಲ ರೈತರೂ ಸಾಲಗಾರರಲ್ಲ, ರೈತರ ಸಾವಿಗೆ ಸಾಲವೊಂದೇ ಕಾರಣವಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವುದೇ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವುದಕ್ಕೆ ಬದಲು, ಸಾಲ ಮನ್ನಾ ವಿಷಯವನ್ನೇ ಮುಂದು ಮಾಡುತ್ತಿರುವುದು ಎಷ್ಟು ಸರಿ?

–ಚೆನ್ನಾದೇವಿ ಗೋವಿಂದು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.