ADVERTISEMENT

ವಾಚಕರ ವಾಣಿ | ನೆನಪಾದ ‘ಬೀಚಿ’ ಮೊನಚು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST

ಹೆಣ್ಣುಮಕ್ಕಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಹಿರೇಮಗಳೂರು ಕಣ್ಣನ್‌ ಅವರನ್ನು ರಂಗಕರ್ಮಿ ಪ್ರಸನ್ನ ಅವರು ಕ್ಷಮಿಸುವ ಔದಾರ್ಯ ತೋರಿರುವುದನ್ನು ಆಕ್ಷೇಪಿಸಿರುವ ಡಾ. ಸುಧಾ ಕೆ. ಅವರ ಅಭಿಪ್ರಾಯ ಓದಿ (ವಾ.ವಾ., ಮಾರ್ಚ್‌ 25), ನನಗೆ ಹಾಸ್ಯ ಸಾಹಿತಿ ಬೀಚಿ ನೆನಪಾದರು. ಹೊರಗೆ ಬಿಟ್ಟ ಪಾದರಕ್ಷೆಗಳು ಕಳುವಾಗುವ ಸಾಧ್ಯತೆಯನ್ನು ಬೀಚಿ ಅವರು ಒಂದು ಸಭೆಯಲ್ಲಿ ಮೊನಚಾಗಿ, ಅಷ್ಟೇ ಬೋಧಪ್ರದವಾಗಿ ಅಭಿವ್ಯಕ್ತಿಸಿದ್ದು ಹೀಗೆ: ‘ನೋಡಿ ಗೆಳೆಯರೆ, ಮದುವೆ ಮನೆಗೆ ಹೋಗುವಾಗ ನೀವು ಚಪ್ಪಲಿ ಹಾಕಿಕೊಂಡು ಹೋಗಬೇಡಿ... ಬರುವಾಗ ಹಾಕಿಕೊಂಡು ಬನ್ನಿ!’ ಸಭೆಯಲ್ಲಿ ಸಣ್ಣಗೆ ಆರಂಭಗೊಂಡ ಕರತಾಡನ ಕೊನೆಗೆ ಭರ್ಜರಿಯಾಗಿತ್ತು. ಒಬ್ಬರಾದರೂ ಸಭಿಕರು ‘ಏನ್ಸಾರ್ ನಮ್ಮನ್ನು ಅಂತಹವರೆಂದಿರಲ್ಲ’ ಅಂತ ಮುನಿಯಲಿಲ್ಲ. ಹದ ವಿನೋದವೆಂದರೆ ಇದೇ ಅಲ್ಲವೆ? ಹಾಸ್ಯಪಟುತ್ವವು ಶಿಷ್ಟಾಚಾರ, ಸದಭಿರುಚಿಯ ಸೀಮೆ ಕಡೆಗಣಿಸಿದರೆ ಆಕ್ರೋಶಕ್ಕೆ ಆಸ್ಪದವಾಗುತ್ತದೆ. ಮಂದಿ ಕೈತಟ್ಟುವುದೇ ಮುಖ್ಯವೆ? ಅಸಂಬದ್ಧ ಪ್ರಾಸಗಳಿಗೂ ಚಪ್ಪಾಳೆಗಳಾಗಿರುತ್ತವೆ. ಚಟಾಕಿಗಳು ಸಭ್ಯವಾಗಿದ್ದರೆ ಜನ ಸ್ವೀಕರಿಸುತ್ತಾರೆ. ಹಾಸ್ಯ ಭಾಷಣಕಾರ ಶ್ರೋತೃಗಳ ಹೃದಯ ಮುಟ್ಟಬೇಕು. ಆಗ ಅಹುದಹುದೆಂದು ಅವರ ಕೈಗಳು ತಂತಾನೇ ತಟ್ಟಿರುತ್ತವೆ.

–ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.