ADVERTISEMENT

ಸರ್ಕಾರಿ ರಜೆ: ಅತಾರ್ಕಿಕ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 4:54 IST
Last Updated 11 ಜೂನ್ 2019, 4:54 IST
   

ಗಿರೀಶ ಕಾರ್ನಾಡ ಅವರ ನಿಧನ ಕರ್ನಾಟಕಕ್ಕೆ ಹಾಗೂ ವಿಶೇಷವಾಗಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟ, ನಿಜ. ಆದರೆ, ಅವರ ನಿಧನದ ನೆಪ ಇಟ್ಟುಕೊಂಡು ಶಾಲಾ– ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಿದ್ದು, ಒಬ್ಬ ಪ್ರಬುದ್ಧ ಚಿಂತಕ ಹಾಗೂ ಜ್ಞಾನದಾಹಿಗೆ ಮಾಡಿದ ಅವಮರ್ಯಾದೆಯೆಂದೇ ಹೇಳಬಹುದು. ರಜೆ ಪಡೆದವರೆಲ್ಲ ಮನೆಯಲ್ಲಿ ಕುಳಿತು, ತಮ್ಮ ದುಃಖವನ್ನು ಹೊರಹಾಕಿ ಸಮಾಧಾನ ತಂದುಕೊಳ್ಳುವುದಿಲ್ಲ ಅಥವಾ ಮೃತರಿಗೆ ಅಂತಿಮ ಗೌರವ ಸಲ್ಲಿಸಲು ಹೋಗುವುದಿಲ್ಲ. ಈ ವಿಷಯ ಗೊತ್ತಿದ್ದೂ ರಜೆ ನೀಡುವ ಇಂಥ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದೇಕೆ?

ಒಬ್ಬ ಮಹಾನ್ ವ್ಯಕ್ತಿ ತೀರಿಕೊಂಡಾಗ ಅವರನ್ನು ನೆನಪಿಸಿಕೊಳ್ಳುವ ಕೆಲಸ ಬರೀ ಟೊಳ್ಳು ಮಾತುಗಳ ಮೂಲಕ ಮತ್ತು ರಜೆ ನೀಡುವ ಮೂಲಕ ಆಗಬಾರದು. ಅದಕ್ಕೆ ಬದಲಾಗಿ, ಆ ದಿನ ಶಾಲಾ– ಕಾಲೇಜುಗಳಲ್ಲಿ ಅವರ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು, ಅವರ ಜೀವನದ ಸಾಕ್ಷ್ಯಚಿತ್ರ ತೋರಿಸುವುದು, ಅವರ ಕೃತಿಗಳ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸುವುದು ಸೂಕ್ತ. ಸರ್ಕಾರಿ ಕಚೇರಿಗಳಲ್ಲಿ ಸ್ಮರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸುವುದು, ಅವರ ಪ್ರಶಸ್ತಿ ಪುರಸ್ಕೃತ ಕೃತಿಯ ವಾಚನ ಮಾಡುವುದು ಬೌದ್ಧಿಕವಾಗಿಯೂ, ಭಾವನಾತ್ಮಕವಾಗಿಯೂ ಒಳ್ಳೆಯ ಕೆಲಸ. ಅದು ಬಿಟ್ಟು ರಜೆ ನೀಡಿ, ಒಬ್ಬ ಮಹಾನ್ ಸಾಹಿತಿಯ ಹೆಸರಿನಲ್ಲಿ ಒಂದು ದಿನ ಪೋಲು ಮಾಡಲು ಲಕ್ಷಾಂತರ ಜನರಿಗೆ ಅವಕಾಶ ಮಾಡಿಕೊಟ್ಟದ್ದು ಸರ್ಕಾರದ ಅತಾರ್ಕಿಕ ನಿರ್ಧಾರ.

ದೀಪಕ್ ತಿಮ್ಮಯ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.