ಸರ್ಕಾರದ ಸಭೆ ಸಮಾರಂಭಗಳಲ್ಲಿ ಕೆಲವು ಕಾಣಿಕೆಗಳನ್ನು ನೀಡಬಾರದೆಂದು ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದರ ಬಗ್ಗೆ ಸುರ್ದಿರ್ಘ ಚಿಂತನೆಗಳು ನಡೆಯಬೇಕಿದೆ.
ಕನ್ನಡ ಪುಸ್ತಕಗಳನ್ನು ನೀಡುವ ಆಶಯ ಉತ್ತಮ ವಾದರೂ ಹೂಗುಚ್ಛ, ಹಾರ ತುರಾಯಿಗಳ ನಿಷೇಧದಿಂದ ಗ್ರಾಮೀಣ ಹೂಗಾರರ ಮೇಲೆ ಹಾಗೂ ಪುಷ್ಪ ಕೃಷಿ ಮಾಡುವ ರೈತರ ಮೇಲೆ ಇದರ ದುಷ್ಪಪರಿಣಾಮ ಆಗುವುದು ಖಚಿತ. ಅದೇ ರೀತಿ ಹಣ್ಣು ಬೆಳೆಗಾರರು, ಮಾರಾಟಗಾರರು ಸಹ ಇದರಿಂದ ಸಂಕಷ್ಟ ಅನುಭವಿಸುವ, ಶಾಲುಗಳ ನಿರ್ಬಂಧದಿಂದ ಕೈಮಗ್ಗ ನೇಕಾರಿಕೆಗೆ ತೊಂದರೆಯಾಗುವ ಸಾಧ್ಯತೆಗಳಿವೆ. ನೆನಪಿನ ಕಾಣಿಕೆಯ ನಿರ್ಬಂಧದಿಂದ ಕಲಾವಿದರಿಗೆ, ಕಂಪ್ಯೂಟರ್ ಆಧಾರಿತ ನೆನಪಿನ ಕಾಣಿಕೆಗಳನ್ನು ರೂಪಿಸುವವರಿಗೆ ನಷ್ಟವಾಗಬಹುದು.
ಸನ್ಮಾನ ಸಮಾರಂಭಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಂಗತಿಗಳ ಬಗೆಗೆ ನಮ್ಮ ಜನರು ಗೌರವ, ಸಂತಸದ ಭಾವನೆಗಳನ್ನು ಹೊಂದಿದ್ದಾರೆ. ಇದರ ಬದಲಾವಣೆಗೆ ಎಲ್ಲರ ಮನಸ್ಸುಗಳೂ ಒಪ್ಪದಿರುವ ಸಾಧ್ಯತೆ ಇದೆ. ಈ ಬಗೆಯ ನಿಷೇಧಕ್ಕೆ ಹಲವರು ತಾತ್ವಿಕ ವಿರೋಧ ಹೊಂದಿದ್ದು, ಈ ಬಗ್ಗೆ ಪರಿಣತರ ತಂಡದಿಂದ ಅನೇಕ ಆಯಾಮಗಳ ಚಿಂತನೆ ಅಗತ್ಯ. ಎಲ್ಲರ ಹಿತದೃಷ್ಟಿಯ ನೆಲೆಯಲ್ಲಿ ಸರ್ಕಾರವು ತನ್ನ ಕಾರ್ಯಕ್ರಮಗಳಲ್ಲಿ ನಿಗದಿತ ಪ್ರಮಾಣದ ಕನ್ನಡ ಪುಸ್ತಕಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ಆದೇಶ ಜಾರಿಗೆ ತರುವುದರ ಜೊತೆಗೆ, ಈಗಾಗಲೇ ಇರುವ ಸಾಂಪ್ರದಾಯಿಕ ಪದ್ಧತಿಯ ಹಾರ ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆಗಳಿಗೂ ಅವಕಾಶ ನೀಡುವುದು ಸೂಕ್ತ. ಇಂತಹ ಸುತ್ತೋಲೆಗಳನ್ನು ಹೊರಡಿಸುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಗಳು ನಡೆದು, ಜನ ಹಿತವೆನಿಸುವ ನಿಯಮಾವಳಿಗಳು ಜಾರಿಗೆ ಬರಲಿ. ಪುಸ್ತಕ ಪ್ರೇಮದೊಟ್ಟಿಗೆ ಜೀವಪರ ಕಾಳಜಿಯ ಚಿಂತನೆಗಳೂ ಎಲ್ಲರಲ್ಲಿ ಮೂಡಬೇಕಿದೆ.
ಆದಪ್ಪ ಮಲ್ಲಪ್ಪ ಗೊರಚಿಕ್ಕನವರ,ಕೂಡಲಸಂಗಮ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.