ನಾಗಾಲ್ಯಾಂಡ್ನ ಕೊಹಿಮಾದ ವಿಶ್ವೇಮ ಎಂಬಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು, ಮಧ್ಯಾಹ್ನದ ಬಿಸಿಯೂಟಕ್ಕೆ ತಮ್ಮದೇ ಆದ ಸಾವಯವ ತರಕಾರಿಗಳನ್ನು ಬೆಳೆದುಕೊಳ್ಳುತ್ತಾ ದೇಶಕ್ಕೇ ಮಾದರಿಯಾಗಿದ್ದಾರೆ.
ಈ ಶಾಲೆಯ ಆವರಣದಲ್ಲಿ ಬೆಳೆಯುವ ತರಕಾರಿಯನ್ನು 60ಕ್ಕೂ ಹೆಚ್ಚು ಮಕ್ಕಳ ಊಟಕ್ಕೆ ಬಳಸಲಾಗುತ್ತಿದೆ. ಈ ಶಾಲೆ 2011ರಿಂದಲೂ ತರಕಾರಿ, ಹಣ್ಣುಗಳನ್ನು ಬೆಳೆಯಲು ತನ್ನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ಇದು ಅಚ್ಚರಿಯ ಸಂಗತಿಯಷ್ಟೇ ಅಲ್ಲ, ಇತರರಿಗೆ ಒಂದು ಪಾಠವೂ ಹೌದು. ಅಡುಗೆ ತ್ಯಾಜ್ಯ ಮತ್ತು ಬೇರುಸಹಿತ ಕಳೆಗಳಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.
ಇಂತಹ ಕ್ರಮವನ್ನು ನಮ್ಮ ರಾಜ್ಯದ ಶಾಲೆಗಳಲ್ಲೂ ಅನುಷ್ಠಾನಗೊಳಿಸಬೇಕು. ಕೃಷಿ ಮತ್ತು ತೋಟಗಾರಿಕೆಯು ನಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಬೇಕು. ಕೃಷಿಯ ಕೌಶಲ ಮತ್ತು ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಹೀಗೆ ಮಾಡಿದಲ್ಲಿ ಮಕ್ಕಳು ಕೃಷಿಯ ಕಡೆಗೆ ಗಮನ ಹರಿಸುವುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಪಟ್ಟಣದ ವಿದ್ಯಾರ್ಥಿಗಳಿಗೆ ಕೃಷಿಯು ಒಂದು ಉದ್ಯೋಗವಾಗಿ ಮಾರ್ಪಡುತ್ತದೆ. ಇದರಿಂದ ನಿರುದ್ಯೋಗ ನಿವಾರಣೆಗೂ ನೆರವಾಗುತ್ತದೆ.
ವಿಜಯ್ಕುಮಾರ್ ಎಚ್.ಕೆ., ರಾಯಚೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.