ಒಂದು ಪಕ್ಷವು ಚುನಾವಣೆಯನ್ನು ಗೆಲ್ಲಲು ಒಬ್ಬ ತಂತ್ರಗಾರನಷ್ಟೇ ಸಾಕು ಎನ್ನುವ ಹೊಸ ಸೂತ್ರ ಅಳವಡಿಸಿ
ಕೊಂಡರೆ ಇನ್ನುಮುಂದೆ ‘ಇದು ಪ್ರಜಾಪ್ರಭುತ್ವ ಅಲ್ಲ ತಂತ್ರ ಪ್ರಭುತ್ವ’ ಎಂದಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಗೆಲುವು ಸಾಧಿಸಿದ್ದು ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಯಿಂದ ಅಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂಬ ಜಿದ್ದಿನಲ್ಲಿ ‘ಮಗ ಸತ್ತರೂ ಪರವಾಗಿಲ್ಲ ಸೊಸೆ ರಂಡೆಯಾಗಬೇಕು’ ಎನ್ನುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಧೋರಣೆಯಿಂದ. ಭ್ರಷ್ಟತೆಯನ್ನೇ ದೊಡ್ಡ ಅಸ್ತ್ರ ಮಾಡಿಕೊಂಡು ಬಿಜೆಪಿಯನ್ನು ಪರ್ಸೆಂಟೇಜ್ ಸರ್ಕಾರ ಎಂದು ಬಿಂಬಿಸಿ ಮತದಾರರನ್ನು ಗೆಲ್ಲಲು ಸಾಧ್ಯವಾಗಬೇಕಾದರೆ, ವಿರೋಧ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಭ್ರಷ್ಟತೆ ಇರಲಿಲ್ಲ ಎಂದಿರಬೇಕು. ನಿಜಸಂಗತಿಯನ್ನು ಮತದಾರ ಬಲ್ಲ.
ಒಂದು ರೂಪಾಯಿಯಲ್ಲಿ ಕೇವಲ 17 ಪೈಸೆ ತೆರಿಗೆ ಹಣ ಸದ್ವಿನಿಯೋಗವಾಗುತ್ತದೆ ಎಂದು 30 ವರ್ಷಗಳ ಹಿಂದೆಯೇ ರಾಜೀವ್ ಗಾಂಧಿ ಸ್ಪಷ್ಟ ಮಾತುಗಳಲ್ಲಿ ಭ್ರಷ್ಟತೆಯನ್ನು ವರ್ಣಿಸಿದ್ದರು. ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಹೇಗೆ ಅಸಾಧ್ಯವೋ ಭ್ರಷ್ಟನಲ್ಲದ ರಾಜಕಾರಣಿಯನ್ನು ಪತ್ತೆ ಹಚ್ಚುವುದೂ ಕಷ್ಟ. ಯಾವ ಪಕ್ಷದ ಭೂತ, ವರ್ತಮಾನದ ಬಗ್ಗೆ ಚರ್ಚೆ ಬೇಡ, ಏನಿದ್ದರೂ ಇನ್ನು ಮುಂದೆ ನಾವು ಭ್ರಷ್ಟತೆಯನ್ನು ನಿರ್ಮೂಲ ಮಾಡುತ್ತೇವೆ ಎಂದು ಮತದಾರರಲ್ಲಿ ನಂಬಿಕೆ ಮೂಡಿಸಿ, ಆಚರಣೆಗೆ ತಂದರೆ ಅದೇ ಪ್ರಾಮಾಣಿಕ ತಂತ್ರಗಾರಿಕೆ.
ಸತ್ಯಬೋಧ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.