ADVERTISEMENT

ಏಕರೂಪಿ ಪಠ್ಯಕ್ರಮ ಕೈಬಿಡಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 20:00 IST
Last Updated 3 ಜೂನ್ 2020, 20:00 IST

ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಇನ್ನು ಮುಂದೆ ಏಕರೂಪದ ಪಠ್ಯವನ್ನು ರೂಪಿಸುವ ಯೋಚನೆಯು ಅವೈಜ್ಞಾನಿಕ ಮತ್ತು ಪ್ರಾದೇಶಿಕ ಅನನ್ಯತೆಯನ್ನು ಕಸಿದುಕೊಂಡಂತೆ ಇದೆ. ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗಳ ಸಂದರ್ಭದಲ್ಲಿ ಆಯಾ ಪ್ರದೇಶದ ಕನ್ನಡಕ್ಕೆ ಕುತ್ತು ತರುತ್ತದೆ. ಪ್ರತಿ ಪ್ರದೇಶಕ್ಕೆ ಅದರದೇ ಆದ ಅನನ್ಯತೆ ಇದೆ. ವಿಶ್ವವಿದ್ಯಾಲಯಗಳಿಗೂ ಪ್ರಾದೇಶಿಕ ಅಸ್ಮಿತೆಯಿದೆ. ಅದನ್ನು ನಾಶಮಾಡಿದಂತಾಗುತ್ತದೆ.

ಕನ್ನಡ ವಿಷಯಕ್ಕಂತೂ ಏಕರೂಪಿ ಅಸಂಗತ. ಸೃಜನಶೀಲ ಸಾಹಿತ್ಯದಲ್ಲೂ ಆಯಾ ಪ್ರಾಂತ್ಯದ ನೆಲದ ಬದುಕು,ಸಂಸ್ಕೃತಿಯ ಹಿರಿಮೆಯಿದೆ. ಅವುಗಳನ್ನು ಪೀಳಿಗೆಗೆ ಹೇಳುವರಾರು? ಈ ನೆಲದ ಬಹುತ್ವ ಮತ್ತು ಬಹುಸಂಸ್ಕೃತಿ ಚಿಂತನೆಯಿಂದ ವಿದ್ಯಾರ್ಥಿಗಳು ವಂಚಿತರಾಗುವುದಷ್ಟೇ ಅಲ್ಲ, ವೈವಿಧ್ಯಮಯ ಜ್ಞಾನಾರ್ಜನೆಯಿಂದಲೂ ವಂಚಿತರಾಗಬೇಕಾಗುತ್ತದೆ. ಸಾಧ್ಯವಾದರೆ ಕಳಪೆ ಪಠ್ಯ ರಚನೆಯಾಗದಂತೆ ಒಂದು ಮಾರ್ಗಸೂಚಿ ರೂಪಿಸಲಿ. ಅದಕ್ಕೊಂದು ತಜ್ಞರ ಸಮಿತಿಯಿರಲಿ.

ಅದು ಪ್ರಾದೇಶಿಕ ಸಮತೋಲನದಿಂದ ಕೂಡಿರಲಿ. ಈಗ ಸರಕಾರ ನೇಮಿಸಿರುವ ಕನ್ನಡ ವಿಷಯದ ತಜ್ಞರು ಕೇವಲ ದಕ್ಷಿಣ ಕರ್ನಾಟಕ ಭಾಗದವರೇ ಆಗಿದ್ದಾರೆ. ಒಬ್ಬರು ಮಾತ್ರ ಹೈದರಾಬಾದ್ ಕರ್ನಾಟಕದವರು. ಇದು ಸಮಂಜಸವಲ್ಲ.ಇಂಥ ಸೂಕ್ಷ್ಮತನವನ್ನು ಗ್ರಹಿಸಿ ಸರಕಾರ ಹೆಜ್ಜೆಯಿಡಲಿ.

ADVERTISEMENT

–ಡಾ.ಡಿ.ಎಸ್.ಚೌಗಲೆ, ಅಧ್ಯಕ್ಷರು.ರಾ.ಚ.ವಿ ಕನ್ನಡ ಅಧ್ಯಾಪಕರ ಪರಿಷತ್ತು,ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.