ಹಾವು ಕಂಡರೆ ಭಕ್ತಿಗಿಂತ ಭಯವೇ ಹೆಚ್ಚು ನಮ್ಮಲ್ಲಿ. ಆಹಾರ ಸರಪಳಿಯ ಅತ್ಯಮೂಲ್ಯ ಕೊಂಡಿಯಾಗಿರುವ ಉರಗಗಳ ಕುರಿತು ಅಖಿಲೇಶ್ ಚಿಪ್ಪಳಿ ಅವರ ವಿಶ್ಲೇಷಣೆಯು (ಪ್ರ.ವಾ., ಜುಲೈ 17) ಜನಸಾಮಾನ್ಯರಲ್ಲಿನ ಆತಂಕಗಳನ್ನು ಕೆಲಮಟ್ಟಿಗಾದರೂ ದೂರ ಮಾಡುವಲ್ಲಿ ಸಹಕಾರಿಯಾಗಿದೆ. ಹಾವುಗಳಿಂದ ಕಚ್ಚಿಸಿಕೊಂಡವರು ಭಯ ಹಾಗೂ ಅಜ್ಞಾನದಿಂದ ಒಂದು ಕಡೆ ಸಾಯುತ್ತಿದ್ದರೆ, ಮತ್ತೊಂದೆಡೆ ವಿವೇಚನಾರಹಿತ ಅಭಿವೃದ್ಧಿ ಯೋಜನೆಗಳಿಂದ ಉರಗಗಳು ತಮ್ಮ ವಾಸಸ್ಥಾನಗಳನ್ನು ಕಳೆದುಕೊಳ್ಳುತ್ತಿರುವುದಲ್ಲದೆ, ಮಾನವನ ಕೈಯಲ್ಲಿ ಬಡಿಸಿಕೊಂಡೂ ನಶಿಸುತ್ತಿವೆ. ಆದರೂ ಅನೇಕ ವನ್ಯಜೀವಿ ಪ್ರೇಮಿಗಳು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಮೂಲಕ ಹಾಗೂ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಲ್ಲಿ ಬಿಡುವುದರೊಂದಿಗೆ ಮಾನವ ಹಾಗೂ ಉರಗಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡುತ್ತಿದ್ದಾರೆ.
ಅಲ್ಲಲ್ಲಿ ಅರಣ್ಯ ಇಲಾಖೆಯಲ್ಲಿನ ಕೆಲ ಆಸಕ್ತ ಸಿಬ್ಬಂದಿಯು ಈ ದಿಸೆಯಲ್ಲಿ ಅತ್ಯುತ್ತಮ ಕಾಯಕ ನಿರ್ವಹಿಸು
ತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲಾಖೆಯ ಸುಮಾರು 25 ಸಿಬ್ಬಂದಿ ಹಾವುಗಳ ನಿರ್ವಹಣೆ ಮಾಡುವುದನ್ನು ಕಲಿತಿದ್ದಾರೆ. ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ಕಾರ್ಯ ಪರಿಣಾಮಕಾರಿಯಾಗಿ ಇಲ್ಲವಾಗಿದೆ. ಅರಣ್ಯ ಇಲಾಖೆ ಅಷ್ಟೇ ಅಲ್ಲದೆ ಕೃಷಿ, ತೋಟಗಾರಿಕೆ, ನಗರಾಭಿವೃದ್ಧಿ ಹಾಗೂ ಪ್ರವಾಸೋದ್ಯಮದಂತಹ ಇಲಾಖೆಗಳು ತಮ್ಮ ಆಯ್ದ ಸಿಬ್ಬಂದಿಗೆ ಉರಗಗಳ ನಿರ್ವಹಣೆ ತರಬೇತಿಯನ್ನು ತುರ್ತಾಗಿ ನೀಡಬೇಕಾಗಿದೆ.
ಮಹಾಂತೇಶ ಗಂಗಯ್ಯ ಓಶಿಮಠ,ಕೈಗಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.