ADVERTISEMENT

ವಾಚಕರ ವಾಣಿ| ಶಿಕ್ಷೆ ಆಗಬೇಕಾದುದು ಯಾರಿಗೆ?!

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 17:25 IST
Last Updated 27 ಜನವರಿ 2023, 17:25 IST

ಬಳ್ಳಾರಿಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಊಟದ ವಿರುದ್ಧ ದನಿ ಎತ್ತಿದ 25 ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಹೊರಕ್ಕೆ ಹಾಕುವ ಮೂಲಕ ಶಿಸ್ತು ಕಲಿಸಲು ಜಿಲ್ಲಾಧಿಕಾರಿ ಮುಂದಾಗಿರುವುದು ವಿಚಿತ್ರವೆನಿಸುತ್ತದೆ. ಸಮಸ್ಯೆಗಳ ವಿರುದ್ಧ ಪ್ರತಿಭಟಿಸಲೇಬಾರದೆಂಬ ಇವರ ನಿಲುವು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವಂತಿದೆ. ಜಿಲ್ಲಾಧಿಕಾರಿ ಬಳಿ ನ್ಯಾಯ ಸಿಗಬಹುದೆಂದು ರಾತ್ರಿಯಲ್ಲೇ ಅವರನ್ನು ಭೇಟಿಯಾಗಲು ಮುಂದಾದ ಆ ವಿದ್ಯಾರ್ಥಿಗಳು ಮಾಡಿದ ತಪ್ಪಾದರೂ ಏನು? ಶಿಸ್ತು ಕಲಿಸಬೇಕಾಗಿರುವುದು
ಅಡುಗೆ ಕಳಪೆಯಾಗಲು ಕಾರಣರಾದವರಿಗೆ. ವಿದ್ಯಾರ್ಥಿಗಳ ಸಣ್ಣ ದನಿಯನ್ನೂ ಹತ್ತಿಕ್ಕುವ ವ್ಯವಸ್ಥೆ ಬಂದರೆ ಮುಂದೆ ಈ ಸಮಾಜದ ದೊಡ್ಡ ಸಮಸ್ಯೆಗಳಿಗೆ ಅವರು ಹೇಗೆ ಪ್ರತಿಕ್ರಿಯಿಸಬೇಕು? ಊಟವೇ ಸರಿಯಿಲ್ಲದೆ ಆ ಮಕ್ಕಳ ಆರೋಗ್ಯವಾದರೂ ಹೇಗೆ ಸುಧಾರಿಸೀತು?

ಹಿಂದೆ ನಾನು ಹಾಸ್ಟೆಲ್‌ನಲ್ಲಿದ್ದಾಗ ಕಳಪೆ ಅಡುಗೆಯ ವಿರುದ್ಧ ವಿದ್ಯಾರ್ಥಿ ನಿಲಯದ ಎಲ್ಲಾ ಹುಡುಗಿಯರು ಸೇರಿ ಅಡುಗೆ ಮನೆಗೆ ಬೀಗ ಹಾಕಿ ಪ್ರತಿಭಟಿಸಿದ್ದೆವು. ಸಂಬಂಧಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ಧರಣಿ ಕೂತೆವು. ವಿದ್ಯಾರ್ಥಿ ನಿಲಯದ ಊಟ ಸರ್ಕಾರ ಕೊಡುವ ಭಿಕ್ಷೆ ಅಲ್ಲವಲ್ಲ, ಅದು ವಿದ್ಯಾರ್ಥಿಗಳ ಹಕ್ಕು. ಸಾರ್ವಜನಿಕರೇ ಕಟ್ಟಿದ ತೆರಿಗೆ ಹಣದ ಫಸಲದು. ಸರ್ಕಾರ ಈ ಕುರಿತು ಸರಿಯಾಗಿ ಕ್ರಮ ವಹಿಸಿ, ಆ ಓದುವ ಮಕ್ಕಳ ಸಮಸ್ಯೆಗಳ ಕಡೆ ಗಮನ ನೀಡಲಿ.

- ಆಶಾ ಎ., ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.